ಹೈದರಾಬಾದ್: ಭಾರತೀಯ ಜನತಾ ಪಕ್ಷವನ್ನು(ಬಿಜೆಪಿ) "ಕೋಮುವಾದಿ" ಎಂದು ಟೀಕಿಸಿದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು, ಹೈದರಾಬಾದ್ ರಾಜ್ಯವನ್ನು ಭಾರತ ಒಕ್ಕೂಟಕ್ಕೆ ವಿಲೀನಗೊಳಿಸುವಲ್ಲಿ ಯಾವುದೇ ಪಾತ್ರ ಹೊಂದಿರದ ಕೋಮುವಾದಿಗಳು ತೆಲಂಗಾಣ ಸಮಾಜವನ್ನು ಒಡೆಯುವ ವಿಕೃತ ಪ್ರಯತ್ನಗಳು ನಡೆದಿವೆ ಎಂದು ಶನಿವಾರ ವಾಗ್ದಾಳಿ ನಡೆಸಿದ್ದಾರೆ.
ಇಂದು ಹೈದರಾಬಾದ್ನಲ್ಲಿ ಶನಿವಾರ ತೆಲಂಗಾಣ ರಾಷ್ಟ್ರೀಯ ಏಕೀಕರಣ ದಿನದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕೆಸಿಆರ್, ರಾಜ್ಯ ಮತ್ತು ರಾಷ್ಟ್ರದಲ್ಲಿ, ತಮ್ಮ ಸುತ್ತ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸುತ್ತಾ ಒಳ್ಳೆಯದು ಯಾವುದು ಮತ್ತು ಕೆಟ್ಟದ್ದು ಯಾವುದು ಎಂಬುದನ್ನು ಅರ್ಥಮಾಡಿಕೊಂಡು ಮುನ್ನಡೆಯಬೇಕು ಎಂದು ಎಚ್ಚರಿಸಿದರು.
ತೆಲಂಗಾಣ ಇತಿಹಾಸದಲ್ಲಿ ಯಾವುದೇ ಪಾತ್ರವಿಲ್ಲದ "ವಿಚ್ಛಿದ್ರಕಾರಿ ಶಕ್ತಿಗಳು" ತಮ್ಮ ರಾಜಕೀಯ ಲಾಭಕ್ಕಾಗಿ ಇತಿಹಾಸವನ್ನು ತಿರುಚಲು ಮತ್ತು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಜನರು ಜಾಗರೂಕರಾಗಬೇಕು ಎಂದು ಕರೆ ನೀಡಿದ ತೆಲಂಗಾಣ ಸಿಎಂ, “ಜನರು ಅಜಾಗರೂಕರಾಗಿದ್ದರೆ ಪರಿಸ್ಥಿತಿ ಹೇಗೆ ದುರದೃಷ್ಟಕರವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ತೆಲಂಗಾಣವೇ ಒಂದು ಉದಾಹರಣೆಯಾಗಿದೆ. ಈ ಹಿಂದೆ ನಡೆದ ತಪ್ಪಿನಿಂದ(ಭಾಷಾವಾರು ಆಂಧ್ರಪ್ರದೇಶ ರಾಜ್ಯ ರಚನೆ) ತೆಲಂಗಾಣ 58 ವರ್ಷಗಳ ಕಾಲ ಶಾಪಗ್ರಸ್ತ ಜೀವನ ನಡೆಸಿದೆ'' ಎಂದು ಹೇಳಿದರು.
ಧಾರ್ಮಿಕ ಮತಾಂಧತೆ ಬೆಳೆದರೆ ದೇಶವೇ ನಾಶವಾಗುತ್ತದೆ ಮತ್ತು ಮಾನವ ಸಂಬಂಧಗಳು ಹದಗೆಡುತ್ತವೆ. "ಅವರು ತಮ್ಮ ಸಂಕುಚಿತ ಹಿತಾಸಕ್ತಿಗಳಿಗಾಗಿ ಸಾಮಾಜಿಕ ಸಂಬಂಧಗಳಲ್ಲಿ ಮುಳ್ಳುಗಳನ್ನು ಬಿತ್ತುತ್ತಿದ್ದಾರೆ. ತಮ್ಮ ವಿಷಕಾರಿ ಹೇಳಿಕೆಗಳಿಂದ ಜನರ ನಡುವೆ ದ್ವೇಷವನ್ನು ಹರಡುತ್ತಿದ್ದಾರೆ. ಜನರ ನಡುವಿನ ಈ ರೀತಿಯ ವಿಭಜನೆಯನ್ನು ಯಾವುದೇ ರೀತಿಯಲ್ಲೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ" ಎಂದಿದ್ದಾರೆ.