ದೇಶ

ಛತ್ತೀಸ್‌ಗಢ: ಸೂರಜ್‌ಪುರದಲ್ಲಿ ಆನೆ ದಾಳಿಗೆ ಇಬ್ಬರು ನಾಗರಿಕರು ಬಲಿ

Lingaraj Badiger

ಕೊರ್ಬಾ: ಛತ್ತೀಸ್‌ಗಢದ ಸೂರಜ್‌ಪುರ ಜಿಲ್ಲೆಯಲ್ಲಿ ಭಾನುವಾರ ನಡೆದ ಪ್ರತ್ಯೇಕ ಆನೆ ದಾಳಿಯಲ್ಲಿ ಇಬ್ಬರು ಹಿರಿಯ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೇಮನಗರ ಅರಣ್ಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಳೆದೊಂದು ವಾರದಿಂದ 12 ಆನೆಗಳ ಹಿಂಡು ತಿರುಗಾಡುತ್ತಿವೆ.

ಮೊದಲ ಘಟನೆಯು ಅಭಯಪುರ್ ಗ್ರಾಮದ ಬಳಿ ಮಧ್ಯರಾತ್ರಿ 12.30 ರ ಸುಮಾರಿಗೆ ನಡೆದಿದ್ದು, ದಾಳಿಗೆ ಬಲಿಯಾದ ವ್ಯಕ್ತಿ ಮನ್ಬೋಧ್ ದೇವರು(70) ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಕಾಡಿನಲ್ಲಿರುವ ದೇವಸ್ಥಾನದಲ್ಲಿ ಧಾರ್ಮಿಕ ವಿಧಿಗಳನ್ನು ನೆರವೇರಿಸಿ ರಾತ್ರಿ ಊಟ ಮಾಡುತ್ತಿದ್ದ ವೇಳೆ ಆನೆ ದಾಳಿ ನಡೆಸಿದೆ ಎಂದು ಸೂರಜ್‌ಪುರ ಅರಣ್ಯ ವಿಭಾಗದ ವಿಭಾಗೀಯ ಅರಣ್ಯಾಧಿಕಾರಿ ಸಂಜಯ್ ಯಾದವ್ ತಿಳಿಸಿದ್ದಾರೆ.

ಆನೆ ಹಿಂಡನ್ನು ನೋಡಿದ ಕೆಲವು ಗ್ರಾಮಸ್ಥರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಆನೆಗಳಲ್ಲಿ ಒಂದು ಆನೆ ಮನ್ಬೋಧ್ ಅವರನ್ನು ಹಿಡಿದು ತುಳಿದು ಸಾಯಿಸಿತು. ಹೀಗಾಗಿ ಅರಣ್ಯಕ್ಕೆ ಹೋಗದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಅದೇ ರೀತಿ ಜನಾರ್ದನಪುರ ಗ್ರಾಮದ ತನ್ನ ಗುಡಿಸಲಿನಲ್ಲಿ ಮಲಗಿದ್ದ ರಾಯಮತಿ ದೇವರು(70) ಎಂಬುವರ ಮೇಲೆ ಅದೇ ಆನೆ ಹಿಂಡು ದಾಳಿ ಮಾಡಿದೆ. ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಅವರು ತಿಳಿಸಿದ್ದಾರೆ.

ಅರಣ್ಯಾಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

SCROLL FOR NEXT