ನವದೆಹಲಿ: ಸುದ್ದಿ ವಾಹಿನಿಗಳಲ್ಲಿ ದ್ವೇಷಪೂರಿತ ಮಾತುಗಳ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರ ಏಕೆ ಮೂಕ ಪ್ರೇಕ್ಷಕನಾಗಿದೆ ಎಂದು ಪ್ರಶ್ನಿಸಿದೆ ಹಾಗೂ ಇಂತಹದ್ದನ್ನು ತಡೆಯಲು ಕಾನೂನು ಆಯೋಗದ ಶಿಫಾರಸುಗಳ ಪ್ರಕಾರ ಕಾನೂನು ಜಾರಿಗೊಳಿಸುವ ಉದ್ದೇಶ ಇದೆಯೇ? ಎಂದು ಪ್ರಶ್ನಿಸಿದೆ.
ಸುದ್ದಿ ವಾಹಿನಿಗಳ ಚರ್ಚೆಯ ಕಾರ್ಯಕ್ರಮಗಳಲ್ಲಿ ದ್ವೇಷಪೂರಿತ ಹೇಳಿಕೆಗಳು ಬಾರದಂತೆ ತಡೆಯುವುದು ನಿರೂಪಕರ ಕರ್ತವ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ದ್ವೇಷಪೂರಿತ ಹೇಳಿಕೆಗಳನ್ನು ನಿಯಂತ್ರಿಸುವುದಕ್ಕೆ, ಸಾಂಸ್ಥಿಕ ಕಾರ್ಯವಿಧಾನದ ಅಗತ್ಯವಿದೆ ಎಂದು ನ್ಯಾ.ಕೆಎಂ ಜೋಸೆಫ್ ಹಾಗೂ ಹೃಷಿಕೇಶ್ ರಾಯ್ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ದ್ವೇಷದ ಭಾಷಣಕ್ಕಾಗಿ ಪಕ್ಷಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ, ಕಾನೂನಿನಡಿ ಅದಕ್ಕೆ ವ್ಯಾಖ್ಯಾನವಿಲ್ಲ: ಚುನಾವಣಾ ಆಯೋಗ
ಸುದ್ದಿ ನಿರೂಪಕರ ಪಾತ್ರ ಬಹಳ ಮುಖ್ಯವಾದದ್ದು, ಮುಖ್ಯವಾಹಿನಿಯ ಮಾಧ್ಯಮಗಳಲ್ಲಾಗಲೀ ಅಥವಾ ಸಾಮಾಜಿಕ ಜಾಲತಾಣಗಳಲ್ಲಾಗಲೀ ಈ ರೀತಿಯ ದ್ವೇಷಪೂರಿತ ಹೇಳಿಕೆಗಳು ಅನಿಯಂತ್ರಿತವಾಗಿವೆ. ಮುಖ್ಯವಾಹಿನಿಯ ಸುದ್ದಿವಾಹಿನಿಗಳು ಈಗಲೂ ಹಿಡಿತವನ್ನು ಹೊಂದಿವೆ. ಚರ್ಚೆಗಳಲ್ಲಿ ದ್ವೇಷಪೂರಿತ ಮಾತು ನಿಯಂತ್ರಿಸುವುದು ಟಿವಿ ನಿರೂಪಕರ ಜವಾಬ್ದಾರಿಯಾಗಿದೆ ಹಲವು ಸಂದರ್ಭಗಳಲ್ಲಿ ಯಾರು ಮಾತನಾಡಲು ಬಯಸುತ್ತಾರೋ ಅವರನ್ನು ಮ್ಯೂಟ್ ಮಾಡಲಾಗುತ್ತದೆ ಎಂದು ಕೋರ್ಟ್ ಹೇಳಿದೆ.