ದೇಶ

ಚೀತಾಗಳು ಮನೆಗೆ ಹಿಂತಿರುಗಿರುವುದರಿಂದ ದೇಶದಲ್ಲಿ ಹೊಸ ಉತ್ಸಾಹ ಮರಳಿದೆ: ಪ್ರಧಾನಿ ನರೇಂದ್ರ ಮೋದಿ

Sumana Upadhyaya

ನವದೆಹಲಿ: ಕೆಲ ದಿನಗಳ ಹಿಂದೆ ಮಧ್ಯ ಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಆಫ್ರಿಕಾದಿಂದ 8 ಚೀತಾಗಳನ್ನು ತರಿಸಿಕೊಂಡ ನಂತರ ದೇಶಕ್ಕೆ ಹೊಸ ಉತ್ಸಾಹ ಬಂದಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ಭಾರತ ದೇಶ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು, ಇಲ್ಲಿನ ಪರಿಸರ ವ್ಯವಸ್ಥೆ ನಿರಂತರವಾಗಿ ಬಲಗೊಳ್ಳುತ್ತಿದೆ ಎಂದರು.

ಗುಜರಾತ್ ನ ನರ್ಮದಾದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಇಂದು ಅವರು ಪರಿಸರ ಖಾತೆ ಸಚಿವರುಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಚೀತಾಗಳು ಭಾರತಕ್ಕೆ ಮರಳುವ ಮೂಲಕ ದೇಶದಲ್ಲಿ ಹೊಸ ಉತ್ಸಾಹ ಮೂಡಿದೆ. ಗಿರ್ ಸಿಂಹಗಳು, ಹುಲಿಗಳು, ಆನೆಗಳು, ಒಂದು ಕೊಂಬಿನ ಘೇಂಢಾಮೃಗ ಮತ್ತು ಚಿರತೆಗಳ ಸಂತತಿ ದೇಶದಲ್ಲಿ ಹೆಚ್ಚಾಗುತ್ತಿದೆ ಎಂದರು.

ಭಾರತ ದೇಶದಲ್ಲಿ ಅರಣ್ಯ ಪ್ರದೇಶಗಳು ಹೆಚ್ಚಾಗಿವೆ. ತೇವಭೂಮಿಗಳು ಕೂಡ ವೇಗವಾಗಿ ಹೆಚ್ಚಾಗುತ್ತಿದೆ. ಇಂದಿನ ನವಭಾರತ ವೇಗವಾಗಿ ಮುನ್ನುಗ್ಗುತ್ತಿದ್ದು ಹೊಸ ಆಲೋಚನೆಗಳು ಮತ್ತು ಹೊಸ ಸಾಮೀಪ್ಯವನ್ನು ಕಾಣುತ್ತಿದೆ. ಭಾರತ ಇಂದು ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕ ದೇಶವಾಗಿದೆ. ಇಲ್ಲಿನ ಪರಿಸರ ವ್ಯವಸ್ಥೆ ಕೂಡ ಬಲವಾಗುತ್ತಿದೆ ಎಂದರು.

2070ರವರೆಗೆ ದೇಶದಲ್ಲಿ ಪರಿಸರದಿಂದ ಶೂನ್ಯ ಹೊರಸೂಸುವಿಕೆ ಗುರಿಯನ್ನು ಹೊಂದಲಾಗಿದೆ. ಇಂದು ದೇಶದಲ್ಲಿ ಹಸಿರೀಕರಣವನ್ನು ಹೆಚ್ಚಿಸುವ ಬಗ್ಗೆ ಗಮನ ಹರಿಸಲಾಗುತ್ತಿದೆ. ಹಸಿರು ಉದ್ಯೋಗ ಕೂಡ ಆದ್ಯತೆಯಾಗಿದೆ. ಈ ಎಲ್ಲಾ ಗುರಿಗಳನ್ನು ಸಾಧಿಸಬೇಕಾದರೆ ಪ್ರತಿಯೊಂದು ರಾಜ್ಯಗಳ ಪರಿಸರ ಸಚಿವಾಲಯದ ಪಾತ್ರ ಮುಖ್ಯವಾಗಿದೆ ಎಂದರು.

ಈ ನಿಟ್ಟಿನಲ್ಲಿ ವೃತ್ತಾಕಾರದ ಆರ್ಥಿಕತೆಯನ್ನು ಎಲ್ಲಾ ರಾಜ್ಯಗಳು ಸಾಧ್ಯವಾದಷ್ಟು ಪ್ರಚುರಪಡಿಸಬೇಕೆಂದು, ಘನ ತ್ಯಾಜ್ಯ ನಿರ್ವಹಣೆ ಮತ್ತು ಏಕಬಳಕೆ ಪ್ಲಾಸ್ಟಿಕ್ ನ್ನು ಹೆಚ್ಚೆಚ್ಚು ಬಳಸುವಂತೆ ಪರಿಸರ ಸಚಿವಾಲಯಗಳು ಜನರನ್ನು ಹುರಿದುಂಬಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದರು.

ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಪ್ರಾಜೆಕ್ಟ್ ಚೀತಾ ಮುಖ್ಯವಾಗಿದ್ದು ವಿಸ್ತೃತ ಜೀವನೋಪಾಯ ಅವಕಾಶಗಳನ್ನು ಸ್ಥಳೀಯ ಸಮುದಾಯಗಳಿಗೆ ಪರಿಸರ ಅಭಿವೃದ್ಧಿ ಮತ್ತು ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳಲ್ಲಿ ಮುಂದುವರಿಸಿಕೊಂಡು ಹೋಗುವುದು ಪ್ರಧಾನಿಯವರ ಬದ್ಧತೆಯಾಗಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.

ಭಾರತದಲ್ಲಿ ಕಳೆದ ಬಾರಿ 1952ರಲ್ಲಿ ಚೀತಾ ಕಣ್ಮರೆಯಾಗಿದ್ದವು. ಸುಮಾರು 7 ದಶಕಗಳ ನಂತರ ಮತ್ತೆ ಬಂದಿದೆ.

SCROLL FOR NEXT