ದೇಶ

ಮನಮೋಹನ್ ಸಿಂಗ್ ಒಬ್ಬ ಅದ್ವಿತೀಯ ವ್ಯಕ್ತಿ, ಆದರೆ ಯುಪಿಎ ಆಡಳಿತದಲ್ಲಿ ಭಾರತದ ಆರ್ಥಿಕತೆ ಸ್ಥಗಿತಗೊಂಡಿತ್ತು: ನಾರಾಯಣ ಮೂರ್ತಿ

Sumana Upadhyaya

ಅಹ್ಮದಾಬಾದ್: ಭಾರತ ದೇಶದ ಯುವ ಜನತೆಯಲ್ಲಿ ಸಾಕಷ್ಟು ಸಾಮರ್ಥ್ಯವಿದ್ದು ಚೀನಾ ಜೊತೆಗೆ ಕಠಿಣ ಸ್ಪರ್ಧೆಯೊಡ್ಡಲು ಭಾರತ ಸಮರ್ಥವಾಗಿದೆ ಎಂದು ಹೇಳಿರುವ ಐಟ ದಿಗ್ಗಜ, ಇನ್ಫೋಸಿಸ್ ಸಂಸ್ಥೆ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ನಿನ್ನೆ ದೇಶದ ಆರ್ಥಿಕತೆ ಬಗ್ಗೆ ಮಾತನಾಡುವಾಗ ಬಹು ಚರ್ಚಿತ ವಿಷಯವೊಂದನ್ನು ಹೇಳಿದರು.

ಮನಮೋಹನ್ ಸಿಂಗ್ ಅವರಂತಹ ಅದ್ವಿತೀಯ ಆರ್ಥಿಕ ತಜ್ಞರಿದ್ದರೂ ಹಿಂದಿನ ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ಭಾರತದ ಆರ್ಥಿಕತೆ ಸ್ಥಗಿತಗೊಂಡಿತ್ತು ಎಂದು ಗುಜರಾತ್ ನ ಅಹ್ಮದಾಬಾದ್ ನಲ್ಲಿ ಭಾರತೀಯ ವ್ಯವಸ್ಥಾಪಕ ಸಂಸ್ಥೆ(IIM)ಯ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸುತ್ತಿದ್ದ ವೇಳೆ ಹೇಳಿದ್ದಾರೆ.

ನಾನು 2008ರಿಂದ 2012ರವರೆಗೆ ಲಂಡನ್ ನ ಹೆಚ್ ಎಸ್ ಬಿಸಿ ಮಂಡಳಿಯಲ್ಲಿದ್ದೆ. ಆರಂಭದ ಕೆಲ ವರ್ಷಗಳಲ್ಲಿ ಮಂಡಳಿಯಲ್ಲಿ ಚೀನಾದ ಹೆಸರು ಎರಡು-ಮೂರು ಬಾರಿ ಪ್ರಸ್ತಾಪವಾಗುತ್ತಿದ್ದರೆ ಭಾರತದ ಹೆಸರು ಒಂದು ಬಾರಿ ಮಾತ್ರ ಪ್ರಸ್ತಾಪವಾಗಿತ್ತು ಎಂದು ಮೂರ್ತಿ ಹೇಳಿದ್ದಾರೆ.

ಇಂದಿನ ದೇಶದ ಆರ್ಥಿಕತೆಗೂ ಹಿಂದಿನ ಆರ್ಥಿಕತೆಗೂ ಹೋಲಿಕೆ ಮಾಡುವ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಳಂಬವಾಗಿರುವುದರಿಂದ ದೇಶದ ಆರ್ಥಿಕತೆ ಬಳಲಿ ಹೋಗಿದೆ. ದುರದೃಷ್ಟವಶಾತ್ ನಂತರ ಏನಾಯ್ತು ಎಂದು ನನಗೆ ಗೊತ್ತಿಲ್ಲ. ಮನಮೋಹನ್ ಸಿಂಗ್ ಸರ್ಕಾರದಲ್ಲಿ, ಅವರೊಬ್ಬ ಅದ್ವಿತೀಯ ಮನುಷ್ಯ. ಅವರ ಬಗ್ಗೆ ನನಗೆ ಬಹಳ ಗೌರವವಿದೆ. ಆದರೆ ದೇಶದ ಆರ್ಥಿಕತೆ ಕುಸಿದು ನಿಂತು ಹೋಗಿತ್ತು. ನಿರ್ಧಾರಗಳನ್ನು ಕ್ಷಿಪ್ರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಪ್ರತಿಯೊಂದು ವಿಳಂಬವಾಗುತ್ತಿದ್ದವು. ನಾನು ಲಂಡನ್ ನ ಹೆಚ್ ಎಸ್ ಬಿಸಿಯನ್ನು ತೊರೆಯುವ ಹೊತ್ತಿಗೆ ಚೀನಾದ ಹೆಸರು 30 ಬಾರಿ ಪ್ರಸ್ತಾಪವಾಗಿದ್ದರೆ ಭಾರತದ ಹೆಸರು ಬಹಳ ವಿರಳವಾಗಿ ಒಂದು ಬಾರಿ ಪ್ರಸ್ತಾಪವಾಗುತ್ತಿತ್ತು  ಎಂದರು. 1991ರ ಆರ್ಥಿಕ ಸುಧಾರಣೆಯ ಶ್ರೇಯಸ್ಸನ್ನು ನಾರಾಯಣ ಮೂರ್ತಿಯವರು ಮನಮೋಹನ್ ಸಿಂಗ್ ಅವರಿಗೆ ನೀಡಿದರು.

ಭಾರತದ ಭವಿಷ್ಯದ ಬಗ್ಗೆ ಏನನ್ನಿಸುತ್ತದೆ ಎಂದು ಕೇಳಿದಾಗ, ಭಾರತದ ಭವಿಷ್ಯ, ದೇಶವನ್ನು ಬೆಳಗುವ, ಚೀನಾವನ್ನು ಸಮರ್ಥವಾಗಿ ಎದುರಿಸುವ ತಾಕತ್ತು ಯುವ ಸಮುದಾಯದಲ್ಲಿದೆ ಎಂದರು.

ಇದೇ ಸಂದರ್ಭದಲ್ಲಿ ನಾರಾಯಣ ಮೂರ್ತಿಯವರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಂದಿರುವ ಮೇಕ್ ಇನ್ ಇಂಡಿಯಾ. ಸ್ಟಾರ್ಟ್ ಅಪ್ ಇಂಡಿಯಾ ಅಭಿಯಾನಗಳನ್ನು ಶ್ಲಾಘಿಸಿದರು. ಒಂದು ಕಾಲವಿತ್ತು, ಬಹುತೇಕ ದೇಶಗಳು ಭಾರತವನ್ನು ಕೀಳಾಗಿ ಕಾಣುತ್ತಿದ್ದವು. ಇಂದು ದೇಶದ ಬಗ್ಗೆ ಒಂದು ಹಂತದ ಗೌರವ ಬಂದಿದೆ. ಭಾರತ ಇಂದು ವಿಶ್ವದ 5ನೇ ಅತಿದೊಡ್ಡ ಆರ್ಥಿಕ ದೇಶವಾಗಿರುವುದೇ ಅದಕ್ಕೆ ಸಾಕ್ಷಿ ಎಂದರು.

1978ರಿಂದ 2022ರವರೆಗೆ 44 ವರ್ಷಗಳಲ್ಲಿ ಚೀನಾ ಆರು ಪಟ್ಟು ಭಾರತವನ್ನು ಹಿಂದಿಕ್ಕಿದೆ. ಆದರೆ ಇಂದಿನ ಯುವ ಜನಾಂಗ ಮನಸ್ಸು ಮಾಡಿದರೆ ಇಂದು ಚೀನಾ ವಿಶ್ವದಲ್ಲಿ ತೆಗೆದುಕೊಳ್ಳುತ್ತಿರುವ ಗೌರವವನ್ನು ಭಾರತ ಸಹ ಪಡೆಯಬಹುದು ಎಂದು ನನಗೆ ನಂಬಿಕೆಯಿದೆ ಎಂದರು.

SCROLL FOR NEXT