ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅವರು ಶನಿವಾರ ಎಐಸಿಸಿ ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರವನ್ನು ಪಕ್ಷದ ಕೇಂದ್ರ ಕಚೇರಿಯಿಂದ ಸ್ವೀಕರಿಸಿದ್ದು, ಅವರು ಸೆಪ್ಟೆಂಬರ್ 30ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ತರೂರ್ ಅವರ ಆಪ್ತ ಸಹಾಯಕ ಆಲಿಮ್ ಜವೇರಿ ಅವರು ನಾಮಪತ್ರ ಪ್ರಕ್ರಿಯೆ ಪ್ರಾರಂಭವಾದ ಮೊದಲ ದಿನವೇ ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರ ಕಚೇರಿಯಲ್ಲಿ ಫಾರ್ಮ್ ಪಡೆದಿದ್ದಾರೆ. ಈ ಮೂಲಕ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ವಿರುದ್ಧ ತರೂರು ಕಣಕ್ಕಿಳಿಯುವುದನ್ನು ಖಚಿತಪಡಿಸಿದ್ದಾರೆ.
ಇದನ್ನು ಓದಿ: ರಂಗೇರಿದ ರಾಜಸ್ತಾನ ರಾಜಕೀಯ; ಸಿಎಂ ಹುದ್ದೆಗಾಗಿ ಸಚಿನ್ ಪೈಲಟ್ ತೀವ್ರ ಲಾಬಿ; ಗೆಹ್ಲೋಟ್ ಉತ್ತರಾಧಿಕಾರಿ ಯಾರು?
ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಸೆಪ್ಟೆಂಬರ್ 30 ರಂದು ತರೂರ್ ಅವರು ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ. ಏಕೆಂದರೆ ಅವರ ನಾಮಪತ್ರವನ್ನು ದೇಶಾದ್ಯಂತ ಅನುಮೋದಿಸುವ ಸಹಿಗಳನ್ನು ಸಂಗ್ರಹಿಸುವ ಆಲೋಚನೆ ಇದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.
ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಯು ಒಟ್ಟು 10 ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರತಿನಿಧಿಗಳಿಂದ ಅನುಮೋದನೆ ಪಡೆಯುವ ಅಗತ್ಯವಿದೆ.
ಸೋಮವಾರ ತರೂರ್ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು.
ಮೂಲಗಳ ಪ್ರಕಾರ ಚುನಾವಣೆಯಲ್ಲಿ ತಾವು "ತಟಸ್ಥ"ವಾಗಿ ಉಳಿಯುವುದಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದ್ದಾರೆ.