ದೇಶ

ಉತ್ತರ ಪ್ರದೇಶ: ದಲಿತ ವಿದ್ಯಾರ್ಥಿ ಮೇಲೆ ರಾಡ್ ನಿಂದ ಹಲ್ಲೆ ನಡೆಸಿದ ಶಿಕ್ಷಕ; 19 ದಿನಗಳ ಬಳಿಕ ಸಾವು

Lingaraj Badiger

ಲಖನೌ: ಶಿಕ್ಷಕರಿಂದ ರಾಡ್ ನಿಂದ ಹಲ್ಲೆಗೊಳಗಾಗಿದ್ದ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ 10ನೇ ತರಗತಿಯ ದಲಿತ ವಿದ್ಯಾರ್ಥಿ ಸಾವನ್ನಪ್ಪಿರುವ ವರದಿಯಾಗಿದೆ. ತರಗತಿಯ ಪರೀಕ್ಷೆಯಲ್ಲಿ ಒಂದು ಪದವನ್ನು ತಪ್ಪಾಗಿ ಬರೆದ ಕಾರಣಕ್ಕಾಗಿ ಮೇಲ್ಜಾತಿಯ ಶಿಕ್ಷಕನಿಂದ ನಿರ್ದಯವಾಗಿ ಥಳಿಸಿದ 19 ದಿನಗಳ ನಂತರ ಬಾಲಕ ಸಾವನ್ನಪ್ಪಿದ್ದಾನೆ.

ನಿಖಿತ್ ದೋಹ್ರೆ ಎಂಬ ಬಾಲಕನನ್ನು ರಾಜ್ಯದ ಇಟಾವಾ ಜಿಲ್ಲೆಯ ವಿಶೇಷ ಆಸ್ಪತ್ರೆಗೆ ಕರೆದೊಯ್ಯುವಾಗ ಶನಿವಾರ ರಾತ್ರಿ ಸಾವನ್ನಪ್ಪಿದ್ದಾನೆ. ಬಾಲಕನ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ, ಶಿಕ್ಷಕ ಅಶ್ವಿನಿ ಸಿಂಗ್ ತನ್ನ ಮಗನ ಮೇಲೆ ಸೆಪ್ಟೆಂಬರ್ 7 ರಂದು ದೊಣ್ಣೆ ಮತ್ತು ರಾಡ್‌ಗಳಿಂದ ಹಲ್ಲೆ ನಡೆಸಿದ್ದಲ್ಲದೆ ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ ಒಂದು ಪದವನ್ನು ತಪ್ಪಾಗಿ ಉಚ್ಚರಿಸಿದ್ದರಿಂದ ಪ್ರಜ್ಞೆ ತಪ್ಪುವವರೆಗೂ ಒದ್ದಿದ್ದಾನೆ ಎಂದು ಹೇಳಿದ್ದಾರೆ.

ಬಾಲಕನ ಚಿಕಿತ್ಸೆಗೆ ಮೊದಲು 10,000 ರೂ. ನಂತರ 30,000ರೂ. ನೀಡಿದ ನಂತರ ಬಾಲಕನ ತಂದೆಯ ದೂರವಾಣಿ ಕರೆಗಳನ್ನು ಸ್ವೀಕರಿಸುವುದನ್ನು ಶಿಕ್ಷಕರು ನಿಲ್ಲಿಸಿದರು ಎಂದು ತಂದೆಯ ದೂರಿನಲ್ಲಿ ತಿಳಿಸಲಾಗಿದೆ. ಶಿಕ್ಷಕನನ್ನ ಭೇಟಿ ಮಾಡಿದಾಗ ಅವರು ಜಾತಿ ನಿಂದನೆ ಮಾಡಿದರೆಂದು ಬಾಲಕನ ತಂದೆ ಆರೋಪಿಸಿದ್ದಾರೆ.

ನನ್ನ ಮಗನನ್ನು ಅನೇಕ ಆಸ್ಪತ್ರೆಗಳಿಗೆ ಕರೆದೊಯ್ದಿದ್ದೇವೆ. ಆದರೆ ಅವನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬಾಲಕನ ತಂದೆ ಪತ್ರಕರ್ತರಿಗೆ ತಿಳಿಸಿದ್ದಾರೆ.

ತಂದೆಯ ದೂರಿನ ಆಧಾರದ ಮೇಲೆ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿ ಶಿಕ್ಷಕನನ್ನು ಬಂಧಿಸಲು ಮೂರು ತಂಡಗಳನ್ನು ರಚಿಸಿದ್ದಾರೆ. ಪೊಲೀಸರು ಮೊದಲ ಮಾಹಿತಿ ವರದಿ ಅಥವಾ ಎಫ್‌ಐಆರ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(ದೌರ್ಜನ್ಯ ತಡೆ) ಕಾಯ್ದೆಯ ವಿಭಾಗಗಳನ್ನು ಸೇರಿಸಿದ್ದಾರೆ.

SCROLL FOR NEXT