ದೇಶ

‘ನಿಜವಾದ ಶಿವಸೇನೆ’ ಹೋರಾಟದಲ್ಲಿ ಉದ್ಧವ್ ಠಾಕ್ರೆ ತಂಡಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ

Nagaraja AB

ನವದೆಹಲಿ: ಏಕನಾಥ್ ಶಿಂಧೆ ವಿರುದ್ಧದ ಹೋರಾಟದಲ್ಲಿ ಉದ್ಧವ್ ಠಾಕ್ರೆ ಅವರಿಗೆ ಭಾರೀ ಹಿನ್ನಡೆಯಾಗಿದೆ. ನಿಜವಾದ ಶಿವಸೇನೆ ಮತ್ತು ಅದರ ಚಿನ್ಹೆಯ ಮೇಲೆ ಏಕನಾಥ್ ಶಿಂಧೆ ನೇತೃತ್ವದ ಗುಂಪಿನ ಹಕ್ಕನ್ನು ಚುನಾವಣಾ ಆಯೋಗ ನಿರ್ಧರಿಸದಂತೆ ತಡೆಯಲು ಸುಪ್ರೀಂಕೋರ್ಟ್ ನಿರಾಕರಿಸಿದೆ. 

ಈ  ಸಂಬಂಧ ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎಂ ಆರ್ ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಮತ್ತು ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪಂಚ ನ್ಯಾಯಾಧೀಶರ ಪೀಠ ಶಿಂಧೆ ಗುಂಪಿನ ಮನವಿಯನ್ನು ಮುಂದುವರಿಸಲು ಚುನಾವಣಾ ಆಯೋಗಕ್ಕೆ ಅನುಮತಿ ನೀಡಿದೆ.

ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಅವರ ಸರ್ಕಾರವು ಜೂನ್‌ನಲ್ಲಿ ಏಕನಾಥ್ ಶಿಂಧೆ ನೇತೃತ್ವದ ದಂಗೆಯ ನಂತರ ಪತನಗೊಂಡಿತು. ಅವರು ಬಿಜೆಪಿಯೊಂದಿಗೆ ಹೊಸ ಸರ್ಕಾರವನ್ನು ರಚಿಸಿದರು. ಜೂನ್ 30 ರಂದು ಶಿಂಧೆ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರ ಉಪನಾಯಕರಾಗಿ ಪ್ರಮಾಣವಚನ ಸ್ವೀಕರಿಸಿದರು.

ಪಕ್ಷಾಂತರ, ವಿಲೀನ ಮತ್ತು ಅನರ್ಹತೆಗೆ ಸಂಬಂಧಿಸಿದ ಹಲವಾರು ಸಾಂವಿಧಾನಿಕ ಪ್ರಶ್ನೆಗಳನ್ನು ಎತ್ತುವ ಉದ್ಧವ್ ಠಾಕ್ರೆ ಮತ್ತು ಶಿಂಧೆ ನೇತೃತ್ವದ ಬಣಗಳು ಸಲ್ಲಿಸಿದ ಅರ್ಜಿಗಳನ್ನು ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠಕ್ಕೆ ಸುಪ್ರೀಂಕೋರ್ಟ್ ಆಗಸ್ಟ್ 23 ರಂದು ವರ್ಗಾಯಿಸಿತ್ತು.

ಪಕ್ಷಾಂತರಗೊಂಡ ಶಾಸಕರ ಅನರ್ಹತೆ, ಸ್ಪೀಕರ್ ಮತ್ತು ರಾಜ್ಯಪಾಲರ ಅಧಿಕಾರ ಮತ್ತು ನ್ಯಾಯಾಂಗ ಪರಾಮರ್ಶೆ ಕುರಿತ ಅರ್ಜಿಗಳ ಪ್ರಮುಖ ಸಾಂವಿಧಾನಿಕ ವಿಷಯಗಳನ್ನು ಪೀಠ ವಿಚಾರಣೆ ನಡೆಸಲಿದೆ ಎಂದು ನ್ಯಾಯಾಲಯ ಹೇಳಿತ್ತು.

ಏಕನಾಥ್ ಶಿಂಧೆ ಅವರಿಗೆ ನಿಷ್ಠರಾಗಿರುವ ಶಾಸಕರು ಮತ್ತೊಂದು ರಾಜಕೀಯ ಪಕ್ಷದೊಂದಿಗೆ ವಿಲೀನಗೊಂಡರೆ ಮಾತ್ರ ಸಂವಿಧಾನದ 10 ನೇ ಶೆಡ್ಯೂಲ್ ಅಡಿಯಲ್ಲಿ ಅನರ್ಹತೆಯನ್ನು ತಪ್ಪಿಸಬಹುದು ಎಂದು ಠಾಕ್ರೆ ಬಣ ನ್ಯಾಯಾಲಯಕ್ಕೆ ತಿಳಿಸಿತ್ತು. ಸ್ವಂತ ಪಕ್ಷದ ವಿಶ್ವಾಸ ಕಳೆದುಕೊಂಡಿರುವ ನಾಯಕನಿಗೆ ಪಕ್ಷಾಂತರ ನಿಷೇಧ ಕಾನೂನು ಅಸ್ತ್ರವಾಗಲಾರದು ಎಂದು ಶಿಂಧೆ ಟೀಂ ವಾದಿಸಿತ್ತು.

SCROLL FOR NEXT