ದೇಶ

'ನನ್ನ ಇಮೇಜ್ ಕೆಡಿಸಲು ಸುಪಾರಿ' ನೀಡಿದ್ದಾರೆ; ಅಂತವರ ಹೆಸರುಗಳನ್ನು ಬಹಿರಂಗಪಡಿಸಲು ಮೋದಿಗೆ ಕಪಿಲ್ ಸಿಬಲ್ ಒತ್ತಾಯ

Ramyashree GN

ನವದೆಹಲಿ: ತಮ್ಮ ಇಮೇಜ್‌ಗೆ ಧಕ್ಕೆ ತರಲು ಕೆಲವರು ಸುಪಾರಿ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ ಒಂದು ದಿನದ ನಂತರ, ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಭಾನುವಾರ ಪ್ರಧಾನಿ ಅಂತವರ ಹೆಸರನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿದರು ಮತ್ತು 'ನಾವು ಅವರನ್ನು ವಿಚಾರಣೆಗೆ ಒಳಪಡಿಸೋಣ' ಎಂದು ಹೇಳಿದರು.

ಭೋಪಾಲ್‌ನ ರಾಣಿ ಕಮಲಾಪತಿ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕೆಲವರು ತಮ್ಮ ಇಮೇಜ್ ಹಾಳುಮಾಡಲು ವಿವಿಧ ಪ್ರಯತ್ನ ಮಾಡುತ್ತಿದ್ದಾರೆ ಮತ್ತು ಈ ಉದ್ದೇಶಕ್ಕಾಗಿ ಭಾರತದಲ್ಲಿ ಮತ್ತು ದೇಶದ ಹೊರಗೆ ಕುಳಿತ ಅವರು 'ಸುಪಾರಿ' ನೀಡಿದ್ದಾರೆ ಎಂದು ಹೇಳಿದರು.

ಈ ಟೀಕೆಗಳಿಗೆ ಪ್ರತಿಕ್ರಿಯಿಸಿದ ಸಿಬಲ್, 'ಮೋದಿ ಜಿಯವರ ಆರೋಪಕ್ಕೆ ಸಂಬಂಧಿಸಿದಂತೆ ದಯವಿಟ್ಟು ಅಂತಹ ವ್ಯಕ್ತಿಗಳ ಹೆಸರುಗಳನ್ನು ನಮಗೆ ತಿಳಿಸಿ: 1) ವ್ಯಕ್ತಿಗಳು 2) ಸಂಸ್ಥೆಗಳು ಅಥವಾ 3) ದೇಶಗಳು. ಇದು ದೇಶದ ರಹಸ್ಯ ವಿಚಾರವಾಗಿರಲು ಸಾಧ್ಯವಿಲ್ಲ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸೋಣ' ಎಂದು ಹೇಳಿದ್ದಾರೆ.

2014 ರಿಂದಲೂ ನಮ್ಮ ದೇಶದಲ್ಲಿ ಕೆಲವು ಜನರು ಸಾರ್ವಜನಿಕವಾಗಿ ಮಾತನಾಡಿ ಮೋದಿಯವರ ವರ್ಚಸ್ಸನ್ನು ಹಾಳು ಮಾಡುತ್ತೇವೆ ಎಂದು ತಮ್ಮ ಸಂಕಲ್ಪವನ್ನು ಘೋಷಿಸಿದ್ದಾರೆ. ಇದಕ್ಕಾಗಿ ಅವರು ಸುಪಾರಿ ನೀಡಿದ್ದಾರೆ ಎಂದು ಮೋದಿ ತಮ್ಮ ಹೇಳಿಕೆಯಲ್ಲಿ ಹೇಳಿದ್ದರು.

ಈ ಜನರನ್ನು ಬೆಂಬಲಿಸಲು ಕೆಲವರು ದೇಶದೊಳಗೆ ಕುಳಿತಿದ್ದಾರೆ ಮತ್ತು ಕೆಲವರು ದೇಶದ ಹೊರಗೆ ಕುಳಿತು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಈ ಜನರು ನಿರಂತರವಾಗಿ ಮೋದಿಯವರ ಪ್ರತಿಷ್ಠೆಯನ್ನು ಹಾಳು ಮಾಡಲು ಮತ್ತು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಆದರೆ, ಭಾರತದ ಬಡವರು, ಮಧ್ಯಮ ವರ್ಗದವರು, ಆದಿವಾಸಿಗಳು, ದಲಿತರು, ಹಿಂದುಳಿದ ವರ್ಗಗಳು ಮತ್ತು ಪ್ರತಿಯೊಬ್ಬ ಭಾರತೀಯರು ಮೋದಿಯ ಭದ್ರತಾ ಕವಚವಾಗಿದ್ದಾರೆ. ಇದು ಈ ಜನರನ್ನು ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳಲು ಒತ್ತಾಯಿಸುತ್ತದೆ ಎಂದು ಪ್ರಧಾನಿ ಹೇಳಿದರು.

SCROLL FOR NEXT