ಕೋಲ್ಕತ್ತಾ: ಕೆಟ್ಟದಾಗಿ ಬಟ್ಟೆ ಧರಿಸುವ ಹುಡುಗಿಯರು ಶೂರ್ಪನಖಿಯಂತೆ ಕಾಮಪ್ರಚೋದಕರಂತೆ ಕಾಣುತ್ತಾರೆ ಎಂದಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಅವರ ಹೇಳಿಕೆ ಕೇಸರಿ ಪಕ್ಷದ ‘ಕೀಳು ಮನಸ್ಥಿತಿ’ಯನ್ನು ಬಹಿರಂಗಪಡಿಸಿದೆ ಎಂದು ತೃಣಮೂಲ ಕಾಂಗ್ರೆಸ್ ಶನಿವಾರ ಟೀಕಿಸಿದೆ.
ಬಿಜೆಪಿಯ ಆಡಳಿತದಲ್ಲಿ ಭಾರತ "ಹಿಂದಕ್ಕೆ ಹೋಗುತ್ತಿದೆ. ವಿಜಯವರ್ಗಿಯ ಅವರ ಹೇಳಿಕೆ ಆ ಪಕ್ಷದ ಕೀಳು ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ" ಎಂದು ಟಿಎಂಸಿ ರಾಜ್ಯಸಭಾ ಸಂಸದ ಜವಾಹರ್ ಸಿರ್ಕಾರ್ ಅವರು ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ: ಕೆಟ್ಟ ಬಟ್ಟೆ ಧರಿಸಿ ಶೂರ್ಪನಖಿಯಂತೆ ಕಾಣ್ತೀರಾ; ದೇವರು ಸುಂದರ ದೇಹ ಕೊಟ್ಟಿದ್ದಾನೆ ಒಳ್ಳೆ ಬಟ್ಟೆ ಧರಿಸಿ: ಬಿಜೆಪಿ ನಾಯಕ
ಈ ಸಂಬಂಧ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮತ್ತೊಬ್ಬ ಟಿಎಂಸಿ ನಾಯಕಿ ಸುಶ್ಮಿತಾ ದೇವ್ ಅವರು, "ಕೊಳಕು ಬಟ್ಟೆಗಳನ್ನು ಯಾರು ವ್ಯಾಖ್ಯಾನಿಸುತ್ತಾರೆ? ಇದು ನಾಚಿಕೆಗೇಡಿನ ಹೇಳಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿಎಂಸಿಯ ಪಶ್ಚಿಮ ಬಂಗಾಳದ ವಕ್ತಾರ ಕುನಾಲ್ ಘೋಷ್ ಅವರು ಬಿಜೆಪಿ ನಾಯಕರ ಹೇಳಿಕೆಯನ್ನು "ಸೆಕ್ಸಿಸ್ಟ್ ಮತ್ತು ಸ್ತ್ರೀದ್ವೇಷ" ಎಂದು ಟೀಕಿಸಿದ್ದಾರೆ.
ಕಳೆದ ಗುರುವಾರ ಹನುಮಾನ್ ಮತ್ತು ಮಹಾವೀರ ಜಯಂತಿಯಂದು ಇಂದೋರ್ನಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದ ವಿಜಯವರ್ಗಿಯಾ, ಕೆಟ್ಟದಾಗಿ ಬಟ್ಟೆ ಧರಿಸುವ ಹುಡುಗಿಯರು ಹಿಂದೂ ಮಹಾಕಾವ್ಯ ರಾಮಾಯಣದ ರಾಕ್ಷಸಿ ಶೂರ್ಪನಖಿಯನ್ನು ಹೋಲುತ್ತಾರೆ ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.