ದೇಶ

ನಮ್ಮ ಮೇಲೆ ಕೆಟ್ಟ ದೃಷ್ಟಿ ಬೀರಲು, ಭಾರತದ ಭೂಮಿ ಆಕ್ರಮಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ: ಅರುಣಾಚಲ ಪ್ರದೇಶದಲ್ಲಿ ಅಮಿತ್ ಶಾ

Srinivas Rao BV

ಅರುಣಾಚಲಪ್ರದೇಶ: ಅರುಣಾಚಲ ಪ್ರದೇಶದಲ್ಲಿ ಎಲ್ಎಸಿಯ ಬಳಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಭಾರತದ ಭೂಮಿಯನ್ನು ಆಕ್ರಮಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
 
ಇಂದು ಐಟಿಬಿಪಿ ಹಾಗೂ ಸೇನ ಯೋಧರ ತ್ಯಾಗದಿಂದಾಗಿ ಇಡೀ ದೇಶದ ಸಮಸ್ತ ಜನತೆ ನೆಮ್ಮದಿಯಾಗಿ ನಿದ್ದೆ ಮಾಡಬಹುದಾಗಿದೆ. ಅವರ ತ್ಯಾಗದ ಪರಿಣಾಮವಾಗಿ ಇಂದು ನಮ್ಮ ದೇಶದ ಮೇಲೆ ಯಾರಿಗೂ ದುಷ್ಟ ದೃಷ್ಟಿ ಹರಿಸುವುದಕ್ಕೆ ಅಥವಾ ಭಾರತಕ್ಕೆ ಸೇರಿದ ಸೂಜಿಯ ಮೊನೆಯಷ್ಟು ಭೂಮಿಯನ್ನು ಆಕ್ರಮಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. 

ಎಲ್ಎಸಿಯ ಬಳಿ ವಾಸಿಸುತ್ತಿರುವ, ಗ್ರಾಮಸ್ಥರು ರಕ್ಷಣಾ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿರುತ್ತಾರೆ ಹಾಗೂ ಕೇಂದ್ರ ಸರ್ಕಾರ ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ (ವಿವಿಪಿ) ಅನುಷ್ಠಾನದ ಮೂಲಕ ಅವರ ವಲಸೆಯನ್ನು ತಡೆಯಲು ಪ್ರಯತ್ನಿಸುತ್ತಿದೆ ಎಂದು ಅಮಿತ್ ಶಾ ಹೇಳಿದರು.  

ಅರುಣಾಚಲ ಪ್ರದೇಶದಲ್ಲಿನ ಮೊದಲ ಗ್ರಾಮ ಕಿಬಿತೂ ನಲ್ಲಿ ಈ  ಕಾರ್ಯಕ್ರಮವನ್ನು ಅಮಿತ್ ಶಾ ಉದ್ಘಾಟಿಸಿದ್ದು, ಈ ಸಂಪರ್ಕ ಮತ್ತು ಮೂಲಸೌಕರ್ಯ ಅಭಿವೃದ್ಧಿ-ಆಧಾರಿತ ಕಾರ್ಯಕ್ರಮವು LAC ಸಮೀಪದ ಹಳ್ಳಿಗಳಲ್ಲಿ ವಾಸಿಸುವ ಜನರ ಜೀವನದ ಗುಣಮಟ್ಟವನ್ನು ಸುಧಾರಿಸಲು ಮತ್ತು ಗಡಿ ಭದ್ರತೆಯನ್ನು ಬಲಪಡಿಸುತ್ತದೆ ಎಂದು ಹೇಳಿದ್ದಾರೆ. 

ವಿವಿಪಿಯನ್ನು ನಾಲ್ಕು ರಾಜ್ಯಗಳಾದ ಅರುಣಾಚಲ, ಸಿಕ್ಕಿಂ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ಮತ್ತು ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಅಳವಡಿಸಲಾಗುವುದು. ಒಟ್ಟಾರೆ 2,967 ಗ್ರಾಮಗಳು ಇದರ ವ್ಯಾಪ್ತಿಗೆ ಬರಲಿವೆ. "10 ವರ್ಷಗಳ ಹಿಂದೆ, ಗಡಿ ಗ್ರಾಮಗಳು ಖಾಲಿಯಾಗುತ್ತಿವೆ ಎಂಬ ಆತಂಕವಿತ್ತು ಆದರೆ ಪ್ರಧಾನಿ ನರೇಂದ್ರ ಮೋದಿ,  ಆ ಗ್ರಾಮಗಳ ಜನರ ಅಭಿವೃದ್ಧಿಗೆ ಭರವಸೆ ನೀಡಿದರು" ಎಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಮಿತ್ ಶಾ ಹೇಳಿದ್ದಾರೆ. ಜನರು "ಅಭಿವೃದ್ಧಿ" ಆಗದ ಹೊರತು ಹಳ್ಳಿಗಳನ್ನು ಬಿಡುವುದನ್ನು ನಿಲ್ಲಿಸುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

“ಅರುಣಾಚಲ ಸರ್ಕಾರ ಮತ್ತು ಕೇಂದ್ರ ಸರ್ಕಾರ ಗ್ರಾಮಸ್ಥರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತದೆ. ಅವರ ಎಲ್ಲಾ ಮೂಲಭೂತ ಅಗತ್ಯಗಳನ್ನು ಪೂರೈಸುತ್ತೇವೆ. ಬ್ಯಾಂಕ್‌ಗಳನ್ನು ಪರಿಚಯಿಸಿ, ಜನರಿಗೆ ಬ್ಯಾಂಕ್ ಖಾತೆ ತೆರೆಯಲು ಸಹಾಯ ಮಾಡುತ್ತೇವೆ, ವಿದ್ಯುತ್, ಎಲ್‌ಪಿಜಿ, ಕುಡಿಯುವ ನೀರು, ಉದ್ಯೋಗ ಮತ್ತು ಶೌಚಾಲಯಗಳನ್ನು ನಿರ್ಮಿಸುತ್ತೇವೆ. ಈ ಗ್ರಾಮಗಳು ಡಿಜಿಟಲ್ ಮತ್ತು ಭೌತಿಕವಾಗಿ ಅರುಣಾಚಲ ಮತ್ತು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕ ಹೊಂದಲಿವೆ ಎಂದು ಕೇಂದ್ರ ಗೃಹ ಸಚಿವರು ಘೋಷಿಸಿದರು.

ಮುಂದಿನ 3 ವರ್ಷಗಳಲ್ಲಿ ಕೇಂದ್ರವು ಇವೆಲ್ಲವನ್ನೂ ಪೂರ್ಣಗೊಳಿಸಲಿದೆ ಎಂದು ಹೇಳಿದ ಅಮಿತ್ ಶಾ, ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತು ಸ್ಥಳೀಯ ಸಂಸ್ಕೃತಿ ಮತ್ತು ಭಾಷೆಯನ್ನು ಸಂರಕ್ಷಿಸುವಾಗ ಪರಿಸರ ಮತ್ತು ಇಂಧನ ಸುರಕ್ಷತೆಯನ್ನು ಸಹ ಖಾತ್ರಿಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

SCROLL FOR NEXT