ಜೈಪುರ: ರಾಜಸ್ಥಾನದಲ್ಲಿ ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ನಿಂತಿರುವ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ತಾವು ಕೈಗೊಂಡಿದ್ದ ನಿರಶನವನ್ನು ಅಂತ್ಯಗೊಳಿಸಿದ್ದಾರೆ. ಆದರೆ ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರವೆಸಗಿದ್ದವರ ವಿರುದ್ಧ ಕ್ರಮ ಕೈಗೊಳ್ಳುವ ಬೇಡಿಕೆಯನ್ನು ಅಶೋಕ್ ಗೆಹ್ಲೋಟ್ ಸರ್ಕಾರದ ಮುಂದಿಟ್ಟು ಸಚಿನ್ ಪೈಲಟ್ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ.
ಸಚಿನ್ ಪೈಲಟ್, ಕಾಂಗ್ರೆಸ್ ನ ಎಚ್ಚರಿಕೆಯ ಹೊರತಾಗಿಯೂ ಜೈಪುರದ ಹುತಾತ್ಮ ಯೋಧರ ಸ್ಮಾರಕದ ಬಳಿ ನಿರಶನ ಕೈಗೊಂಡಿದ್ದರು. ಸಿಎಂ ಗೆಹ್ಲೋಟ್ ಹಾಗೂ ಪೈಲಟ್ ಇಬ್ಬರ ನಡುವೆ 2018 ರ ಡಿಸೆಂಬರ್ ನಿಂದಲೂ ಭಿನ್ನಾಭಿಪ್ರಾಯ ತಲೆದೋರಿದೆ.
ನಿರಶನ ಸ್ಥಳದಿಂದ ವಾಪಸ್ ತೆರಳುವಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಪೈಲಟ್ ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ವೇದಿಕೆಯಲ್ಲಿ 5 ಗಂಟೆಗಳ ಕಾಲ ಬೆಂಬಲಿಗರೊಂದಿಗೆ ಪೈಲಟ್ ಕುಳಿತಿದ್ದರು. ಆಡಳಿತ ಪಕ್ಷದ ಯಾವುದೇ ಶಾಸಕನೂ ಪೈಲಟ್ ನಿರಶನದ ಸ್ಥಳಕ್ಕೆ ಭೇಟಿ ನೀಡಲಿಲ್ಲ. ಆದರೆ ಮಾಜಿ ಶಾಸಕರು ಹಾಗೂ ಕಾಂಗ್ರೆಸ್ ನಾಯಕರು ಪೈಲಟ್ ಜೊತೆ ಇದ್ದರು.