ದೇಶ

ಮಾನನಷ್ಟ ಮೊಕದ್ದಮೆಯಲ್ಲಿ ತಪ್ಪಿತಸ್ಥನೆಂದು ತೀರ್ಪು: ತಡೆಯಾಜ್ಞೆ ಕೋರಿ ರಾಹುಲ್ ಗಾಂಧಿ ಸಲ್ಲಿಸಿರುವ ಅರ್ಜಿ ವಿಚಾರಣೆ

Sumana Upadhyaya

ಸೂರತ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ವಿಚಾರಣೆಯನ್ನು ಗುಜರಾತ್‌ ರಾಜ್ಯದ ಸೂರತ್ ನಗರದ ಸೆಷನ್ಸ್ ನ್ಯಾಯಾಲಯವು ಗುರುವಾರ ಆರಂಭಿಸಿದೆ. ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ ಮನವಿಯ ವಿಚಾರಣೆಯನ್ನು ನ್ಯಾಯಾಲಯ ಆರಂಭಿಸಿದೆ.

ಬಿಜೆಪಿ(BJP) ಶಾಸಕ ಮತ್ತು ರಾಹುಲ್ ಗಾಂಧಿ ವಿರುದ್ಧ ದೂರು ನೀಡಿದ್ದ ಪೂರ್ಣೇಶ್ ಮೋದಿ ಅವರು ಇದೇ ನ್ಯಾಯಾಲಯದಲ್ಲಿ ಈ ಹಿಂದೆ ನೀಡಿದ್ದ ಹೇಳಿಕೆಯಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾನಹಾನಿಕರ ಹೇಳಿಕೆಗಳನ್ನು ಮತ್ತೆ ಮತ್ತೆ ನೀಡುತ್ತಾ ಬಂದಿದ್ದಾರೆ. ಅವರು "ಪುನರಾವರ್ತಿತ ಅಪರಾಧಿ" ಯಾಗಿದ್ದು ಅವರಿಗೆ ನೀಡಿರುವ ಎರಡು ವರ್ಷದ ಶಿಕ್ಷೆಗೆ ತಡೆಯಾಜ್ಞೆ ನೀಡದಂತೆ ಮನವಿ ಮಾಡಿದ್ದಾರೆ. 

ಇಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಆರ್.ಪಿ.ಮೊಗೇರ ಅವರು ಕೋರ್ಟ್ ಸಭಾಂಗಣದಲ್ಲಿ ವಾದಿ-ಪ್ರತಿವಾದಿ ಎರಡೂ ಕಡೆಯ ವಿಚಾರಣೆ ಪ್ರಾರಂಭಿಸಿದರು. ರಾಹುಲ್ ಗಾಂಧಿ ಅವರ ದೋಷಾರೋಪಣೆಗೆ ತಡೆಯಾಜ್ಞೆ ಕೋರಿ ಅವರ ವಕೀಲರು ಮಂಡಿಸಿದ ವಾದವನ್ನು ನ್ಯಾಯಾಲಯವು ಮೊದಲು ಆಲಿಸಿದೆ. ನಂತರ, ಶಿಕ್ಷೆಗೆ ತಡೆ ಕೋರಿ ಸಲ್ಲಿಸಿದ ಮನವಿಯ ವಿರುದ್ಧ ನಾವು ನಮ್ಮ ಆಕ್ಷೇಪಣೆಗಳು ಮತ್ತು ವಾದಗಳನ್ನು ಮಂಡಿಸುತ್ತೇವೆ ಎಂದು ಪೂರ್ಣೇಶ್ ಮೋದಿ ಅವರ ಪರ ವಕೀಲ ಕೇತನ್ ರೇಶಮ್ವಾಲಾ ಹೇಳಿದ್ದಾರೆ.

ಕಳೆದ ಮಾರ್ಚ್ 23 ರಂದು ಸೂರತ್‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಏಪ್ರಿಲ್ 13, 2019 ರಂದು ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಕರ್ನಾಟಕದ ರಾಯಚೂರಿನಲ್ಲಿ ಮಾತನಾಡಿದ್ದ ವೇಳೆ "ಎಲ್ಲಾ ಕಳ್ಳರಿಗೂ ಮೋದಿ ಸಾಮಾನ್ಯ ಉಪನಾಮ ಹೇಗೆ" ಎಂದು ಪ್ರಶ್ನಿಸಿದ್ದರು. 

ರಾಹುಲ್ ಗಾಂಧಿಯವರ ಹೇಳಿಕೆ ತಪ್ಪಿತಸ್ಥವೆಂದು ಪರಿಗಣಿಸಿ ಸೂರತ್ ಕೋರ್ಟ್ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಈ ತೀರ್ಪಿನ ವಿರುದ್ಧ ರಾಹುಲ್ ಗಾಂಧಿ ಅವರು ನ್ಯಾಯಾಧೀಶ ಮೊಗೇರ ಅವರ ಮುಂದೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಮಧ್ಯೆ ಶಿಕ್ಷೆಗೆ ತಡೆ ನೀಡುವಂತೆಯೂ ಅವರು ಕೋರಿದ್ದಾರೆ. 

SCROLL FOR NEXT