ದೇಶ

ಅತೀಕ್ -ಅಶ್ರಫ್ ಸಹೋದರರ ಹತ್ಯೆ ನಂತರ ಕೈಗೊಂಡ ಕ್ರಮಗಳ ವರದಿ ಸಲ್ಲಿಸಿ: ಯುಪಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ

Shilpa D

ನವದೆಹಲಿ: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಪಾತಕಿ, ಮಾಜಿ ಸಂಸದ ಅತೀಕ್ ಅಹಮದ್‌ ಮತ್ತು ಆತನ ತಮ್ಮ ಅಶ್ರಫ್  ಹತ್ಯೆ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಕೈಗೆತ್ತಿಕೊಂಡಿದೆ.

ಆಸ್ಪತ್ರೆಯ ಪ್ರವೇಶ ದ್ವಾರದಿಂದ ಆಂಬುಲೆನ್ಸ್‌ ನಲ್ಲಿ ಅವರನ್ನು ಏಕೆ ಕರೆದೊಯ್ಯಲಿಲ್ಲ?  ಏಕೆ ಪರೇಡ್ ಮಾಡಲಾಯಿತು? ಎಂದು ಸರಕಾರವನ್ನು ಸುಪ್ರೀಂ ಪ್ರಶ್ನಿಸಿದೆ. ಏ.15ರ ರಾತ್ರಿ ಪತ್ರಕರ್ತರ ಸೋಗಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಪೊಲೀಸರು ಮತ್ತು ಮಾಧ್ಯಮದವರ ಎದುರೇ ಅತೀಕ್‌ ಮತ್ತು ಅಶ್ರಫ್‌ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದರು.

2023 ರ ಏಪ್ರಿಲ್ 15 ರಂದು ಅತೀಕ್ ಮತ್ತು ಅವರ ಸಹೋದರನ ಸಾವಿನ ಬಗ್ಗೆ ತನಿಖೆ ಮಾಡಲು ತೆಗೆದುಕೊಂಡ ಕ್ರಮಗಳಿಗೆ ಸಂಬಂಧಿಸಿದಂತೆ ಹಾಗೂ  ಅತೀಕ್ ಅಹ್ಮದ್ ಪುತ್ರ ಅಸಾದ್ ನ  ಎನ್ ಕೌಂಟರ್ ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಮಗ್ರ ಸ್ಥಿತಿ ಗತಿಗಳ ವರದಿ ನೀಡುವಂತೆ ನ್ಯಾಯಮೂರ್ತಿಗಳಾದ ಎಸ್‌ಆರ್ ಭಟ್ ಮತ್ತು ದೀಪಂಕರ್ ದತ್ತಾ ಅವರ ಪೀಠ  ಸರ್ಕಾರಕ್ಕೆ ಸೂಚಿಸಿದೆ.  ಅಹ್ಮದ್ ಮತ್ತು ಅವರ ಸಹೋದರನನ್ನು ಆಸ್ಪತ್ರೆಗೆ ಕರೆದೊಯ್ಯಲಾಗುವುದು ಎಂದು ಶೂಟರ್‌ಗಳಿಗೆ ಹೇಗೆ ತಿಳಿದಿತ್ತು ಎಂದು ನ್ಯಾಯಾಲಯವು  ಪ್ರಶ್ನಿಸಿದೆ.

2017 ರಿಂದ ಉತ್ತರಪ್ರದೇಶದಲ್ಲಿ ನಡೆದ 183 ಎನ್‌ಕೌಂಟರ್‌ಗಳ ಬಗ್ಗೆ ತನಿಖೆ ನಡೆಸಬೇಕೆಂದು ವಕೀಲ ವಿಶಾಲ್ ತಿವಾರಿ ಅವರು ಅರ್ಜಿಯಲ್ಲಿ ಕೋರಿದ್ದಾರೆ. ಉತ್ತರ ಪ್ರದೇಶದ ವಿಶೇಷ ಪೊಲೀಸ್ ಮಹಾನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ) 2017 ರಿಂದ ನಡೆದ 183 ಎನ್‌ಕೌಂಟರ್‌ಗಳ ತನಿಖೆಗಾಗಿ ವಕೀಲ ವಿಶಾಲ್ ತಿವಾರಿ ಅವರು ಸಲ್ಲಿಸಿದ ಮನವಿಯನ್ನು ಮೂರು ವಾರಗಳ ನಂತರ ವಿಚಾರಣೆ ನಡೆಸುವಂತೆ ನ್ಯಾಯಾಲಯ ಸೂಚಿಸಿದೆ. . ನ್ಯಾಯಮೂರ್ತಿ ಬಿ ಎಸ್ ಚೌಹಾಣ್ ಅವರ ಆಯೋಗದ ವರದಿಯ ನಂತರ ರಾಜ್ಯವು ಕೈಗೊಂಡ ಕ್ರಮಗಳನ್ನು ಬಹಿರಂಗಪಡಿಸಲು ಕೋರ್ಟ್ ಆದೇಶಿಸಿದೆ.

ಉತ್ತರ ಪ್ರದೇಶದಲ್ಲಿ ಕಾನೂನಿನ ನಿಯಮ ಉಲ್ಲಂಘನೆ ಮತ್ತು ಪೊಲೀಸ್ ದೌರ್ಜನ್ಯದ ಬಗ್ಗೆಆರೋಪಿಸಿರುವ ತಿವಾರಿ,  ಶಿಕ್ಷೆಯ ಅಧಿಕಾರವು ನ್ಯಾಯಾಂಗಕ್ಕೆ ಮಾತ್ರ ಇದೆ. ಪೊಲೀಸರು ಡೇರ್‌ಡೆವಿಲ್‌ಗಳಾದರೆ ಇಡೀ ಕಾನೂನಿನ ನಿಯಮಗಳು ಕುಸಿದು ಪೊಲೀಸರ ವಿರುದ್ಧ ಜನರ ಮನಸ್ಸಿನಲ್ಲಿ ಭಯವನ್ನು ಹುಟ್ಟುಹಾಕುತ್ತದೆ. ಇದು ಪ್ರಜಾಪ್ರಭುತ್ವಕ್ಕೆ ತುಂಬಾ ಅಪಾಯಕಾರಿ, ಇದರಿಂದ ಮತ್ತಷ್ಟು ಅಪರಾಧಕ್ಕೆ ಕಾರಣವಾಗುತ್ತದೆ ಎಂದು ವಿವರಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ  ಪೊಲೀಸರು ಅಂತಿಮ ನ್ಯಾಯ ನೀಡುವ ಅಥವಾ ಶಿಕ್ಷೆ ನೀಡುವ ಪ್ರಾಧಿಕಾರವಾಗಲು ಸಂವಿಧಾನದಲ್ಲಿ ಅವಕಾಶವಿಲ್ಲ  ಎಂದು ತಿವಾರಿ ಉಲ್ಲೇಖಿಸಿದ್ದಾರೆ.

SCROLL FOR NEXT