ನವದೆಹಲಿ: ಸಂಸತ್ತಿನ ಪ್ರಸಕ್ತ ಮುಂಗಾರು ಅಧಿವೇಶನ ವಿಪಕ್ಷಗಳ ಪ್ರತಿಭಟನೆ, ಪದೇ ಪದೇ ಅಡ್ಡಿಪಡಿಸುವುದು, ಕೋಲಾಹಲದಿಂದಾಗಿ ಇಲ್ಲಿಯವರೆಗೂ ಸರಿಯಾಗಿ ಕಲಾಪ ನಡೆಯದೇ ಮುಂದೂಡಲಾಗುತ್ತಿದೆ.ಈ ಮಧ್ಯೆ ಇಂದು ರಾಜ್ಯಸಭೆ ಸ್ವಾರಸ್ಯಕರ ಪ್ರಸಂಗವೊಂದಕ್ಕೆ ಸಾಕ್ಷಿಯಾಯಿತು.
ನಿನ್ನೆ ಸಭಾಪತಿಯನ್ನು ಭೇಟಿಯಾದಾಗ ಸ್ವಲ್ಪ ಕೋಪಗೊಂಡಿದ್ದರು ಎಂಬ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಆರೋಪಕ್ಕೆ ಸಭಾಪತಿ ಜಗದೀಪ್ ಧನಕರ್ ಹಾಸ್ಯ ಚಟಾಕಿ ಉತ್ತರದ ಮೂಲಕ ಸದನ ನಗೆ ಗಡಲಲ್ಲಿ ತೇಲುವಂತೆ ಮಾಡಿದರು.
ಖರ್ಗೆಯವರಿಗೆ ಉತ್ತರಿಸಿದ ಸಭಾಪತಿ" ನನಗೆ ಮದುವೆಯಾಗಿ 45 ವರ್ಷ ಆಗಿದೆ. ನನ್ನನ್ನು ನಂಬಿರಿ, ಸಾರ್, ನಾನು ಎಂದಿಗೂ ಕೋಪಗೊಳ್ಳುವುದಿಲ್ಲ. ಚಿದಂಬರಂ ಹಿರಿಯ ವಕೀಲರು, ಹಿರಿಯ ವಕೀಲರು ಎಂಬುದು ತಿಳಿಯುತ್ತದೆ. ನಾವು ಕೋಪ ಮಾಡಿಕೊಳ್ಳುವ ಹಕ್ಕನ್ನು ಹೊಂದಿಲ್ಲ. ನಿಮಗೆ ಆಡಳಿತಾತ್ಮಕ ಹಕ್ಕಿದೆ ಸರ್, ಎಂದಿಗೂ ನಾನು ಕೋಪಗೊಳ್ಳುವುದಿಲ್ಲ, ದಯವಿಟ್ಟು ನಿಮ್ಮ ಹೇಳಿಕೆಯನ್ನು ಮಾರ್ಪಡಿಸಿಕೊಳ್ಳಿ ಎಂದರು.
ಇದನ್ನೂ ಓದಿ: 'ಪ್ರಧಾನ ಮಂತ್ರಿಗಳಿಗೆ ಸದನಕ್ಕೆ ಬಂದು ಹೇಳಿಕೆ ನೀಡಿ ಎಂದು ಆದೇಶಿಸಲು ಸಾಧ್ಯವಿಲ್ಲ': ರಾಜ್ಯಸಭಾಧ್ಯಕ್ಷ ಜಗದೀಪ್ ಧಂಖರ್
ಧನಕರ್ ಅವರ ಹಾಸ್ಯಭರಿತ ಉತ್ತರಕ್ಕೆ ಸದಸ್ಯರೆಲ್ಲರೂ ನಗುವಿನಲ್ಲಿ ತೇಲಾಡಿದರು. ಕೂಡಲೇ ಪ್ರತಿಕ್ರಿಯಿಸಿದ ಖರ್ಗೆ, ನಿಮ್ಮ ಕೋಪವನ್ನು ತೋರಿಸುವುದಿಲ್ಲ, ಆದರೆ, ಕೋಪ ಒಳಗೆ ಇರುತ್ತದೆ ಎಂದರು. ಖರ್ಗೆ ಅವರ ಉತ್ತರಕ್ಕೆ ನಗುತ್ತಾ, ತಮ್ಮ ಪತ್ನಿಯನ್ನು ಉಲ್ಲೇಖಿಸಿದ ಸಭಾಪತಿ, ಅವರು ಈ ಸದನದ ಸದಸ್ಯರಲ್ಲ. ಈ ಸಂಬಂಧ ಸದನದ ಸದಸ್ಯರಲ್ಲದವರ ಬಗ್ಗೆ ನಾವು ಚರ್ಚಿಸಲು ಸಾಧ್ಯವಿಲ್ಲ. ಇಲ್ಲದಿದ್ದರೆ ನಾವು ಚರ್ಚಿಸಬಹುದು ಎಂದು ಹೇಳಿದರು.
ನಂತರ ಮಣಿಪುರ ಸಮಸ್ಯೆ ಕುರಿತು ಸಂಸತ್ತಿನಲ್ಲಿ ನಿಯಮ 267ರ ಅಡಿಯಲ್ಲಿ ಚರ್ಚಿಸಬೇಕೆಂಬ ಬೇಡಿಕೆಯ ಕುರಿತು ಸಭಾಪತಿಯವರ ಮೇಲೆ ಕೋಪ ವ್ಯಕ್ತಪಡಿಸಿದ ಖರ್ಗೆ, ಈ ನಿಯಮದಡಿ ಚರ್ಚೆಗೆ ಒಪ್ಪದ ಸರ್ಕಾರ ಯಾಕೆ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ ಎಂದು ಪ್ರಶ್ನಿಸಿದರು.