ದೇಶ

ಕುನೋ ಉದ್ಯಾನವನದಲ್ಲಿ ಚೀತಾಗಳ ಪ್ರಾಣ ಉಳಿಸಲು ಶತಪ್ರಯತ್ನ ಮಾಡಲಾಗುತ್ತಿದೆ: ಸುಪ್ರೀಂಗೆ ಕೇಂದ್ರ ಅಫಿಡವಿಟ್

Vishwanath S

ನವದೆಹಲಿ: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ 9 ಚೀತಾಗಲು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ವಿಚಾರಣೆ ನಡೆಯಿತು. ದೇಶದಲ್ಲಿ ಚೀತಾಗಳ ಪುನರ್ವಸತಿಯಲ್ಲಿ ಕೆಲವು ಸಮಸ್ಯೆಗಳಿವೆ, ಆದರೆ ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.

ಕೇಂದ್ರದ ವಾದವನ್ನು ಸ್ವೀಕರಿಸಿದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮುಕ್ತಾಯಗೊಳಿಸಿತು. ಭಾರತದಲ್ಲಿ ಚೀತಾಗಳನ್ನು ನೆಲೆಗೊಳಿಸುವ ಯೋಜನೆಯ ಬಗ್ಗೆ ಸರ್ಕಾರವನ್ನು ಪ್ರಶ್ನಿಸಲು ಯಾವುದೇ ಕಾರಣವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ 20 ಚೀತಾಗಳನ್ನು ಕುನೊಗೆ ತರಲಾಗಿದೆ. ಇಲ್ಲಿ ನಾಲ್ಕು ಮರಿಗಳು ಜನಿಸಿದವು. ಈ ಪೈಕಿ 6 ಚೀತಾ ಹಾಗೂ ಮೂರು ಮರಿಗಳು ಸಾವನ್ನಪ್ಪಿವೆ. ಈ ಸಂಬಂಧ ಅರ್ಜಿ ಸಲ್ಲಿಸಲಾಗಿತ್ತು.

ವಿಶ್ವದಲ್ಲಿಯೇ ಮೊದಲ ಬಾರಿಗೆ ಚೀತಾಗಳನ್ನು ಒಂದು ಖಂಡದಿಂದ ಇನ್ನೊಂದು ಖಂಡಕ್ಕೆ ಸ್ಥಳಾಂತರಿಸಲಾಗಿದೆ ಎಂದು ವಿಚಾರಣೆ ವೇಳೆ ಕೇಂದ್ರ ಹೇಳಿದೆ. ಚೀತಾಗಳು ತಮ್ಮ ಆವರಣದಲ್ಲಿ ಹೆಚ್ಚಿನ ತಾಪಮಾನವನ್ನು ಹೊಂದಲು ಸಹ ಕಷ್ಟ. ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದ ಕಡಿಮೆ ತಾಪಮಾನಕ್ಕೆ ಹೋಲಿಸಿದರೆ, ಇಲ್ಲಿ ತಾಪಮಾನ ಹೆಚ್ಚು ಎಂದು ಕೇಂದ್ರ ಹೇಳಿದೆ.

1952ರಲ್ಲಿ ದೇಶದಲ್ಲಿ ಚೀತಾಗಳ ನಿರ್ನಾಮವಾಗಿವೆ ಎಂದು ಘೋಷಿಸಲಾಯಿತು. ದೇಶದಲ್ಲಿ ಚೀತಾಗಳಿಗೆ ಪುನರ್ವಸತಿ ಕಲ್ಪಿಸುವ ಯೋಜನೆಯ ಭಾಗವಾಗಿ ವಿದೇಶದಿಂದ ಚೀತಾಗಳನ್ನು ತರಲಾಗಿದೆ.

ವಿಶ್ವದ ಸಾವಿನ ಪ್ರಮಾಣ ಕಡಿಮೆ
ಭಾರತದಲ್ಲಿನ ಎಲ್ಲಾ ಸವಾಲುಗಳ ನಂತರ, ಚೀತಾಗಳ ಸಾವಿನ ಪ್ರಮಾಣವು ಪ್ರಪಂಚದ ಇತರ ಭಾಗಗಳಿಗೆ ಹೋಲಿಸಿದರೆ ತುಂಬಾ ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇತರೆ ಕಾಡು ಪ್ರಾಣಿಗಳಾದ ಹುಲಿ, ಚಿರತೆ, ಕಾಡುಹಂದಿಗಳಿಂದ ಇವುಗಳನ್ನು ರಕ್ಷಿಸುವುದೇ ದೊಡ್ಡ ಸವಾಲಾಗಿದೆ. ಸೋಂಕು ಮತ್ತು ನಿರ್ಜಲೀಕರಣವು ಚೀತಾಗಳ ಸಾವಿಗೆ ಪ್ರಮುಖ ಕಾರಣಗಳಾಗಿವೆ. ಈ ವಿಚಾರದಲ್ಲಿ ಅಂತಾರಾಷ್ಟ್ರೀಯ ತಜ್ಞರಿಂದ ಅಭಿಪ್ರಾಯ ಪಡೆಯಲಾಗುತ್ತಿದೆ ಎಂದಿದೆ.

ಪ್ರತಿ ವರ್ಷ 12 ರಿಂದ 14 ಚೀತಾಗಳನ್ನು ಭಾರತಕ್ಕೆ ತರಲಾಗುತ್ತದೆ
ನಮ್ಮ ಯೋಜನೆಯ ಪ್ರಕಾರ ದೇಶದಲ್ಲಿ ಪ್ರತಿ ವರ್ಷ ಸರಾಸರಿ 5 ರಿಂದ ಎಂಟು ಚೀತಾ ಮರಿಗಳು ಜನಿಸುತ್ತವೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಮುಂದಿನ ಐದು ವರ್ಷಗಳ ಕಾಲ ವಿದೇಶದಿಂದ 12 ರಿಂದ 14 ಚೀತಾಗಳನ್ನು ಸರ್ಕಾರ ತರಲಿದೆ. ಪ್ರಸ್ತುತ ಕುನೊದಲ್ಲಿ ಒಂದು ಮರಿ ಸೇರಿದಂತೆ 15 ಚೀತಾಗಳಿವೆ ಎಂದು ಮಾಹಿತಿ ನೀಡಿದೆ.

SCROLL FOR NEXT