ಕೋಝಿಕೋಡ್: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಆತಂಕಕಾರಿಯಾಗಿದ್ದು, ಅದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ.
ಮಣಿಪುರದಲ್ಲಿನ ಹಿಂಸಾಚಾರ ವಿಭಜನೆ, ದ್ವೇಷ ಮತ್ತು ಕೋಪದ ನಿರ್ದಿಷ್ಟ ರೀತಿಯ ರಾಜಕೀಯದ ನೇರ ಪರಿಣಾಮವಾಗಿದೆ. ಆದ್ದರಿಂದ ಕುಟುಂಬವಾಗಿ ಎಲ್ಲರನ್ನೂ ಒಟ್ಟಿಗೆ ಇಡುವುದು ಮುಖ್ಯವಾಗಿದೆ ಎಂದಿದ್ದಾರೆ. ಎರಡು ದಿನಗಳ ಕೇರಳ ಪ್ರವಾಸದಲ್ಲಿರುವ ರಾಹುಲ್ ಇಂದು ರಾತ್ರಿ ದೆಹಲಿಗೆ ಹಿಂತಿರುಗಲಿದ್ದಾರೆ.
ಇದನ್ನೂ ಓದಿ: ಮಣಿಪುರ ಹೊತ್ತಿ ಉರಿಯುತ್ತಿದ್ದರೆ, ಪ್ರಧಾನಿ ಮೋದಿ ಸಂಸತ್ತಿನಲ್ಲಿ ನಗುತ್ತಿದ್ದರು: ವಯನಾಡಿನಲ್ಲಿ ರಾಹುಲ್ ಗಾಂಧಿ
ಕೊಡೆಂಚೇರಿಯಲ್ಲಿರುವ ಸೇಂಟ್ ಜೋಸೆಫ್ ಹೈಸ್ಕೂಲ್ ಸಭಾಂಗಣದಲ್ಲಿ ಸಮುದಾಯ ವಿಕಲಚೇತನ ನಿರ್ವಹಣಾ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಹಿಂಸಾಚಾರದ ಪರಿಣಾಮವಾಗಿ ಉಂಟಾದ ಗಾಯಗಳು ವಾಸಿಯಾಗಲು ಹಲವು ವರ್ಷಗಳು ಬೇಕಾಗುತ್ತದೆ. ದುಃಖ ಮತ್ತು ಕೋಪವು ಅಷ್ಟು ಸುಲಭವಾಗಿ ಹೋಗುವುದಿಲ್ಲ ಎಂದು ಅವರು ಹೇಳಿದರು.
ಮಣಿಪುರ ಹಿಂಸಾಚಾರವು ಒಂದು ರಾಜ್ಯದಲ್ಲಿ ವಿಭಜನೆ, ದ್ವೇಷ ಮತ್ತು ಕೋಪದ ರಾಜಕೀಯವನ್ನು ಬಳಸಿದಾಗ ಏನಾಗುತ್ತದೆ ಎಂಬುದಕ್ಕೆ ಪಾಠವಾಗಿದೆ ಎಂದರು. ವಯನಾಡ್ ಸಂಸದರಾಗಿ ಮರುಸೇರ್ಪಡೆಯಾದ ನಂತರ ಗಾಂಧಿಯವರು ಮೊದಲ ಬಾರಿಗೆ ಕೇರಳಕ್ಕೆ ಭೇಟಿ ನೀಡಿದ್ದಾರೆ.