ಭೋಪಾಲ್: ದೇಶದಲ್ಲಿ ಶೇ.82ರಷ್ಚು ಮಂದಿ ಹಿಂದೂಗಳಿದ್ದು ಹೀಗಾಗಿ ಇಲ್ಲಿ ಹಿಂದೂ ರಾಷ್ಟ್ರ ಹೌದೇ ಅಲ್ಲವೇ ಎಂಬ ಚರ್ಚೆಯೇ ಬೇಕಿಲ್ಲ ಎಂಬ ಮಧ್ಯ ಪ್ರದೇಶ ಸಿಎಂ ಕಮಲ್ ನಾಥ್ ಅವರ ಹೇಳಿಕೆ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಹೌದು.. ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರು ಬಾಗೇಶ್ವರ್ ಧಾಮದ ಮುಖ್ಯ ಅರ್ಚಕ ಧೀರೇಂದ್ರ ಶಾಸ್ತ್ರಿ ಅವರಿಗೆ ಆತಿಥ್ಯ ನೀಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುವಾಗ 'ದೇಶದಲ್ಲಿ ಶೇ.82ರಷ್ಟು ಹಿಂದೂಗಳಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಹೀಗಾಗಿ ನಮ್ಮದು ಹಿಂದೂ ದೇಶ ಎಂಬ ಚರ್ಚೆಯ ಅಗತ್ಯವಿಲ್ಲ ಎಂದು ಕಮಲ್ ನಾಥ್ ಹೇಳಿದ್ದರು.
ಇದಕ್ಕೂ ಮೊದಲು ಸ್ವಯಂ ಘೋಷಿತ ದೇವಮಾನವ ಧೀರೇಂದ್ರ ಶಾಸ್ತ್ರಿ ಅವರೂ ಕೂಡ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡುವಾಗ ಕಮಲ್ ನಾಥ್ ಹೇಳಿಕೆ ನೀಡಿದ್ದರು.
ಕಮಲ್ ನಾಥ್ ಹೇಳಿಕೆ ಕಾಂಗ್ರೆಸ್ ನಲ್ಲೇ ವಿರೋಧ
ಇನ್ನು ಸಿಎಂ ಕಮಲ್ ನಾಥ್ ಹೇಳಿಕೆ ಕಾಂಗ್ರೆಸ್ ನಲ್ಲೇ ವಿರೋಧ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ಮಾತ್ರವಲ್ಲದೇ ಕಾಂಗ್ರೆಸ್ ಮಿತ್ರಪಕ್ಷ ಆರ್ ಜೆಡಿ ಕೂಡ ಅಸಮಾಧಾನ ಹೊರಹಾಕಿದೆ. ತೀವ್ರ ಹಿಂದುತ್ವ ಧೋರಣೆ ತಳೆಯುವ ಧೀರೇಂದ್ರ ಶಾಸ್ತ್ರಿ ಜತೆ ಕಮಲನಾಥ್ ಪುತ್ರನ ಆಪ್ತತೆ ಬಗ್ಗೆ ಟೀಕೆ ಮಾಡಿರುವ ಆರ್ ಜೆಡಿ ನಾಯಕ ಶಿವಾನಂದ್ ತಿವಾರಿ, 'ಶಾಸ್ತ್ರಿ ಅವರು ಹಿಂದುತ್ವದ ಅಜೆಂಡಾಕ್ಕಾಗಿ ವಿರೋಧವನ್ನು ವಿರೋಧಿಸುತ್ತಿದ್ದಾರೆ ಮತ್ತು ಭಾರತದಲ್ಲಿ ಸರ್ಕಾರವು ಯಾವುದೇ ಸಿದ್ಧಾಂತದ ಆಧಾರದ ಮೇಲೆ ಅಲ್ಲ ಸಂವಿಧಾನದ ಆಧಾರದ ಮೇಲೆ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ರಾಜಿನಾಮೆ ನೀಡಿ ಎಂದ ದಿಗ್ವಿಜಯ್ ಸಿಂಗ್
ಇನ್ನು ಕಮಲ್ ನಾಥ್ ಅವರ ಹಿಂದೂರಾಷ್ಟ್ರದ ಹೇಳಿಕೆ ವಿಚಾರವಾಗಿ ವ್ಯಾಪಕ ಚರ್ಚೆಯಾಗುತ್ತಿರುವಂತೆಯೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, 'ಇದು ಹಿಂದೂ ರಾಷ್ಟ್ರ ಅಥವಾ ಮುಸ್ಲಿಂ ರಾಷ್ಟ್ರದ ವಿಷಯವಲ್ಲ. ಈ ದೇಶ ಎಲ್ಲರಿಗೂ ಸೇರಿದ್ದು. ಹಿಂದೂಗಳ ಜೊತೆಗೆ ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು, ಜೈನರು, ಬೌದ್ಧರು ಮತ್ತು ಎಲ್ಲಾ ಧರ್ಮದವರು ಸಹ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಶಹೀದ್ ಭಗತ್ ಸಿಂಗ್ ಜೊತೆಗೆ ಅಶ್ಫಾಕುಲ್ಲಾನನ್ನು ಗಲ್ಲಿಗೇರಿಸಲಿಲ್ಲವೇ? ಈ ದೇಶ ಎಲ್ಲರಿಗೂ ಸೇರಿದ್ದು ಎಂದು ಹೇಳಿದ್ದಾರೆ.
ಅಂತೆಯೇ ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುವ ಜನರು ರಾಜೀನಾಮೆ ನೀಡಬೇಕು, ಭಾರತ ಹಿಂದೂ ರಾಷ್ಟ್ರ ಎಂಬ ಪ್ರಶ್ನೆಯೇ ಇಲ್ಲ ಎಂದು ಕಿಡಿಕಾರಿದ್ದಾರೆ.
ಭಜರಂಗದಳ ನಿಷೇಧವಿಲ್ಲ
ಇದೇ ವೇಳೆ ನಾವು ಮಧ್ಯಪ್ರದೇಶದಲ್ಲಿ ನಾವು ಚುನಾವಣೆಯಲ್ಲಿ ಗೆದ್ದರೆ ಬಜರಂಗ ದಳವನ್ನು ನಿಷೇಧಿಸುವುದಿಲ್ಲ ಎಂದು ಹೇಳಿದ್ದು, ಬಜರಂಗ ದಳದಲ್ಲಿಯೂ ಕೆಲವು ಒಳ್ಳೆಯ ಜನರು ಇರಬಹುದು, ಆದರೆ ನಾವು ಗಲಭೆ ಅಥವಾ ಹಿಂಸಾಚಾರದಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.