ಬೆಂಗಳೂರು: ಡಿಜಿಟಲ್ ಆರ್ಥಿಕತೆ ಬಗ್ಗೆ ಚರ್ಚೆ ನಡೆಸಲು ಬೆಂಗಳೂರಿಗಿಂತ ಪ್ರಶಸ್ತವಾದ ಸ್ಥಳ ಬೇರೊಂದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅವರು ಇಂದು ಬೆಂಗಳೂರಿನಲ್ಲಿ ನಡೆದ ವರ್ಚುವಲ್ ಮೂಲಕ ಜಿ20 ಡಿಜಿಟಲ್ ಆರ್ಥಿಕ ಸಚಿವಾಲಯ ಸಭೆಯನ್ನುದ್ದೇಶಿಸಿ ಮಾತನಾಡಿ, ಬೆಂಗಳೂರು ವಿಜ್ಞಾನ, ತಂತ್ರಜ್ಞಾನ, ಉದ್ಯಮಶೀಲತೆಯ ಕೇಂದ್ರವಾಗಿದೆ.ಹೀಗಾಗಿ ಡಿಜಿಟಲ್ ಆರ್ಥಿಕತೆಗೆ ಹೇಳಿ ಮಾಡಿಸಿದ ಸ್ಥಳ ಬೆಂಗಳೂರು ಆಗಿದೆ ಎಂದರು.
ಡಿಜಿಟಲೀಕರಣದಲ್ಲಿ ಭಾರತದ ಪಯಣವನ್ನು ಶ್ಲಾಘಿಸಿದ ಅವರು, 2015ರಲ್ಲಿ ಡಿಜಿಟಲ್ ಇಂಡಿಯಾ ಅಭಿಯಾನ ನಂತರದ ಬೆಳವಣಿಗೆಗಳ ಬಗ್ಗೆ ಮಾತನಾಡಿದರು. ಈ ಡಿಡಿಟಲ್ ರೂಪಾಂತರವು ಸಂಶೋಧನೆ, ತ್ವರಿತ ಜಾರಿ, ಆಂತರಿಕ ಉತ್ತೇಜನಗಳಲ್ಲಿ ಕಂಡುಬರುತ್ತಿದ್ದು, ನಮ್ಮ ಊಹೆಗೆ ನಿಲುಕದ ರೀತಿಯಲ್ಲಿ ಪ್ರಗತಿಯಾಗಿದೆ ಎಂದರು.
ಇಂದು ಭಾರತದಲ್ಲಿ 850 ಮಿಲಿಯನ್ ಜನರು ಇಂಟರ್ನೆಟ್ ಬಳಸುತ್ತಿದ್ದಾರೆ. ಕೇಂದ್ರ ಸರ್ಕಾರದ ಕಾರ್ಯಕ್ರಮಗಳಾದ ಆಧಾರ್, ಜನ ಧನ ಖಾತೆ, ಮೊಬೈಲ್ ಟ್ರಿನಿಟಿ ಕ್ರಾಂತಿಗಳು 1.3 ಶತಕೋಟಿಗಿಂತಲೂ ಹೆಚ್ಚು ಜನರನ್ನು ತಲುಪುತ್ತಿದೆ.ಯುಪಿಐ ಮೂಲಕ 10 ಬಿಲಿಯನ್ ಗೆ ಹತ್ತಿರ ತಿಂಗಳ ವಹಿವಾಟು ನಡೆಯುತ್ತಿದೆ. ಜಾಗತಿಕ ಮಟ್ಟದ ಶೇಕಡಾ 45ರಷ್ಟು ಪಾವತಿಗಳು ನಿಖರ ಸಮಯದಲ್ಲಿ ಭಾರತದಲ್ಲಿ ಆಗುತ್ತಿವೆ ಎಂದರು.