ದೇಶ

ಈರುಳ್ಳಿಗೆ ರೇಟ್ ಜಾಸ್ತಿಯಾದರೆ ನಾಲ್ಕು ತಿಂಗಳು ತಿನ್ನಬೇಡಿ: ಮಹಾರಾಷ್ಟ್ರ ಸಚಿವ ದಾದಾ ಭೂಸೆ

Sumana Upadhyaya

ಮುಂಬೈ: ಕಳೆದ ಎರಡು ತಿಂಗಳು ಟೊಮ್ಯಾಟೊ ಬೆಲೆ ಗಗನಕ್ಕೇರಿ ಗ್ರಾಹಕರು ತೀವ್ರ ಬೆಲೆ ತೆರಬೇಕಾಗಿ ಬಂತು. ಇದೀಗ ಅದರ ಬೆಲೆ ಇಳಿಕೆಯಾಗಿ ಈರುಳ್ಳಿ ಬೆಲೆ ಏರಿಕೆಯಾಗುವ ಸೂಚನೆ ಸಿಕ್ಕಿದೆ.

ಈರುಳ್ಳಿ ಮೇಲೆ ಶೇಕಡಾ 40 ರಫ್ತು ಸುಂಕವನ್ನು ವಿಧಿಸುವ ಕೇಂದ್ರದ ನಿರ್ಧಾರದ ವಿರುದ್ಧ ರೈತರು ಮತ್ತು ವ್ಯಾಪಾರಿಗಳ ಪ್ರತಿಭಟನೆಯ ನಡುವೆ, ಮಹಾರಾಷ್ಟ್ರದ ಸಚಿವ ದಾದಾ ಭೂಸೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈರುಳ್ಳಿ ಬೆಲೆ ಏರಿಕೆಯಾದರೆ ಕೆಲವು ಸಮಯ ತಿನ್ನದೇ ಇರಿ ಎಂದು ಹೇಳಿದ್ದಾರೆ. 

ಮಹಾರಾಷ್ಟ್ರ ಲೋಕೋಪಯೋಗಿ ಸಚಿವರಾಗಿರುವ ದಾದಾ ಭೂಸೆ, ಕೇಂದ್ರ ಸರ್ಕಾರ ರಫ್ತು ಸುಂಕವನ್ನು ವಿಧಿಸುವ ನಿರ್ಧಾರವನ್ನು ಸರಿಯಾದ ಸಮನ್ವಯದಿಂದ ತೆಗೆದುಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ.  

ಕೇಂದ್ರ ಸರ್ಕಾರ ಆಗಸ್ಟ್ 19 ರಂದು ಈರುಳ್ಳಿ ರಫ್ತಿನ ಮೇಲೆ ಶೇಕಡಾ 40 ರಷ್ಟು ಸುಂಕವನ್ನು ವಿಧಿಸಿ ಬೆಲೆ ಏರಿಕೆಯನ್ನು ತಡೆಯಲು ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆಯನ್ನು ಸುಧಾರಿಸಿದೆ. ಹಣಕಾಸು ಸಚಿವಾಲಯವು ಅಧಿಸೂಚನೆಯ ಮೂಲಕ ಡಿಸೆಂಬರ್ 31, 2023 ರವರೆಗೆ ಈರುಳ್ಳಿ ಮೇಲೆ ಶೇಕಡಾ 40 ರಫ್ತು ಸುಂಕವನ್ನು ವಿಧಿಸಿದೆ.

ನೀವು 10 ಲಕ್ಷ ರೂಪಾಯಿ ಮೌಲ್ಯದ ವಾಹನವನ್ನು ಬಳಸಿ ಓಡಾಡುವಾಗ, ತರಕಾರಿ ಉತ್ಪನ್ನವನ್ನು ಚಿಲ್ಲರೆ ದರಕ್ಕಿಂತ 10 ಅಥವಾ 20 ರೂಪಾಯಿಗಳಷ್ಟು ಹೆಚ್ಚಿನ ದರದಲ್ಲಿ ಖರೀದಿಸಬಹುದು, ಈರುಳ್ಳಿ ಖರೀದಿಸಲು ಸಾಧ್ಯವಾಗದವರು ಮೂರ್ನಾಲ್ಕು ತಿಂಗಳು ಅದನ್ನು ಸೇವಿಸದಿದ್ದರೆ ಏನೂ ತೊಂದರೆಯಾಗುವುದಿಲ್ಲ ಎಂದರು. 

ರಫ್ತು ಸುಂಕ ವಿಧಿಸುವ ನಿರ್ಧಾರವನ್ನು ಸರಿಯಾದ ಸಮನ್ವಯದಿಂದ ತೆಗೆದುಕೊಳ್ಳಬೇಕಿತ್ತು. ಕೆಲವೊಮ್ಮೆ ಈರುಳ್ಳಿ ಕ್ವಿಂಟಲ್‌ಗೆ 200 ರೂಪಾಯಿಗೆ ಏರಿಕೆಯಾಗುತ್ತದೆ. ಆಗ ಕ್ವಿಂಟಾಲ್ ಗೆ 2 ಸಾವಿರ ರೂಪಾಯಿಯಾಗುತ್ತದೆ. ಚರ್ಚೆ ನಡೆಸಿ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಭೂಸೆ ಹೇಳಿದರು.

ವ್ಯಾಪಾರಸ್ಥರು ನಾಸಿಕ್‌ನ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ (APMC) ಈರುಳ್ಳಿ ಹರಾಜನ್ನು ಅನಿರ್ದಿಷ್ಟಾವಧಿಗೆ ಮುಚ್ಚಲು ನಿರ್ಧರಿಸಿದರು, ಇದು ಭಾರತದ ಅತಿದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆಯಾಗಿರುವ ಲಾಸಲ್‌ಗಾಂವ್ ಸೇರಿದಂತೆ ಎಲ್ಲಾ ಕಡೆಗೆ ಅನ್ವಯವಾಗಲಿದೆ. 

ಕೇಂದ್ರವು ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳುವವರೆಗೆ ಅನಿರ್ದಿಷ್ಟಾವಧಿಯವರೆಗೆ ಈರುಳ್ಳಿ ಹರಾಜಿನಲ್ಲಿ ಪಾಲ್ಗೊಳ್ಳದಂತೆ ನಾಸಿಕ್ ಜಿಲ್ಲಾ ಈರುಳ್ಳಿ ವರ್ತಕರ ಸಂಘ ಕರೆ ನೀಡಿದೆ. ರಫ್ತು ಸುಂಕವನ್ನು ಹಿಂಪಡೆಯುವಂತೆ ಒತ್ತಾಯಿಸಿ ಹಲವಾರು ರೈತರು ಮತ್ತು ವ್ಯಾಪಾರಿಗಳು ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಿದರು. 

SCROLL FOR NEXT