ದೇಶ

ಮಧುರೈ ರೈಲಿಗೆ ಬೆಂಕಿ: ಐವರು ಕೇಟರಿಂಗ್ ಕೆಲಸಗಾರರ ಬಂಧನ

Lingaraj Badiger

ಮಧುರೈ: 9 ಜನರ ಸಜೀವ ದಹನಕ್ಕೆ ಕಾರಣವಾದ ಮಧುರೈ ರೈಲು ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ರೈಲಿನಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಬಳಸಿದ ಆರೋಪದ ಮೇಲೆ ಪೊಲೀಸರು ಸೋಮವಾರ ಐವರು ಕೇಟರಿಂಗ್ ಕೆಲಸಗಾರರನ್ನು ಬಂಧಿಸಿದ್ದಾರೆ.

ಬಂಧಿತ ಕೇಟರಿಂಗ್ ಕೆಲಸಗಾರರು ಉತ್ತರ ಪ್ರದೇಶದ ಯಾತ್ರಾರ್ಥಿಗಳ ಗುಂಪಿನೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ದುರಂತದ ನಂತರ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದ ಸರ್ಕಾರಿ ರೈಲ್ವೆ ಪೊಲೀಸರು ಒಂದು ದಿನ ತೀವ್ರ ವಿಚಾರಣೆ ನಡೆಸಿದ ನಂತರ ಇಂದು ಅವರನ್ನು ಬಂಧಿಸಲಾಗಿದೆ.

ಬಂಧಿತರನ್ನು ಮಧುರೈನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ಸೆಪ್ಟೆಂಬರ್ 11 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಲಖನೌ–ರಾಮೇಶ್ವರಂ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಟೂರ್ ಆಪರೇಟರ್ ಕಾಯ್ದಿರಿಸಿದ್ದ ಖಾಸಗಿ ಕೋಚ್‌ನಲ್ಲಿ ಹಲವು ಜನ ತೀರ್ಥಯಾತ್ರೆಗೆ ಹೊರಟಿದ್ದರು. ಕೋಚ್‌ನಲ್ಲಿ ಯಾತ್ರಾರ್ಥಿಗಳು, ಪ್ರವಾಸ ಸಂಘಟಕರು ಮತ್ತು ಐವರು ಅಡುಗೆ ಕೆಲಸಗಾರರು ಸೇರಿದಂತೆ ಒಟ್ಟು 64 ಪ್ರಯಾಣಿಕರಿದ್ದರು.

ಕಳೆದ ಶನಿವಾರ ಬೆಂಕಿ ಅವಘಡ ಸಂಭವಿಸಿ 9 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ.

SCROLL FOR NEXT