ದೇಶ

ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಹಿನ್ನೆಲೆ ವೀಕ್ಷಕರನ್ನು ಕಳಿಸಿದ ಕಾಂಗ್ರೆಸ್

Srinivas Rao BV

ನವದೆಹಲಿ: ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ನಾಲ್ಕು ರಾಜ್ಯಗಳಿಗೆ ತನ್ನ ವೀಕ್ಷಕರನ್ನು ಕಳಿಸಿದೆ. 

ರಾಜಸ್ಥಾನದಲ್ಲಿ ಪಕ್ಷ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ಮಧುಸೂದನ್ ಮಿಸ್ತ್ರಿ, ಮುಕುಲ್ ವಾಸ್ನಿಕ್ ಮತ್ತು ಶಕೀಲ್ ಅಹ್ಮದ್ ಖಾನ್ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ ವೀಕ್ಷಕರನ್ನಾಗಿ ನೇಮಿಸಿದೆ.

ತೆಲಂಗಾಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರೂ ಆದ, ಡಿಸಿಎಂ ಡಿಕೆ ಶಿವಕುಮಾರ್, ದೀಪಾ ದಾಸ್ ಮುನ್ಷಿ, ಅಜೋಯ್ ಕುಮಾರ್, ಕೆ ಮುರಳೀಧರನ್ ಮತ್ತು ಕೆ ಜೆ ಜಾರ್ಜ್ ಅವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ.

ಛತ್ತೀಸ್‌ಗಢಕ್ಕೆ ಕಾಂಗ್ರೆಸ್ ಖಜಾಂಚಿ ಅಜಯ್ ಮಾಕನ್, ರಮೇಶ್ ಚೆನ್ನಿತ್ತಲ ಮತ್ತು ಪ್ರೀತಮ್ ಸಿಂಗ್ ಅವರನ್ನು ಎಐಸಿಸಿ ವೀಕ್ಷಕರನ್ನಾಗಿ ಕಳುಹಿಸಿದೆ. ಮಧ್ಯಪ್ರದೇಶಕ್ಕೆ ಪಕ್ಷದ ನಾಯಕರಾದ ಅಧೀರ್ ರಂಜನ್ ಚೌಧರಿ, ಪೃಥ್ವಿರಾಜ್ ಚವಾಣ್, ರಾಜೀವ್ ಶುಕ್ಲಾ ಮತ್ತು ಚಂದ್ರಕಾಂತ್ ಹಂದೋರೆ ಅವರನ್ನು ನಿಯೋಜಿಸಲಾಗಿದೆ.

ಆಯಾ ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳು ಮತ್ತು ಉಸ್ತುವಾರಿಗಳು ಮೇಲಿನ ವೀಕ್ಷಕರೊಂದಿಗೆ ಸಮನ್ವಯ ಸಾಧಿಸಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಆದೇಶದಲ್ಲಿ ತಿಳಿಸಿದ್ದಾರೆ.

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ತೆಲಂಗಾಣ ನಾಲ್ಕು ರಾಜ್ಯಗಳ ಮತ ಎಣಿಕೆ ಭಾನುವಾರ ನಡೆಯಲಿದೆ. ಮಿಜೋರಾಂನಲ್ಲಿ ಸೋಮವಾರ ಮತ ಎಣಿಕೆ ನಡೆಯಲಿದೆ. 

SCROLL FOR NEXT