ಚೆನ್ನೈ: ಮೈಚಾಂಗ್ ಚಂಡಮಾರುತದಿಂದಾಗಿ ಚೆನ್ನೈನ ಹಲವು ಭಾಗಗಳಲ್ಲಿ ಭಾರಿ ಗಾಳಿಯೊಂದಿಗೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತೀವ್ರ ಸಂಕಷ್ಟ ಎದುರಾಗಿದೆ. ಸೋಮವಾರ ಬೆಳಿಗ್ಗೆ ಚೆನ್ನೈನ ಪೂರ್ವ ಕರಾವಳಿ ರಸ್ತೆಯ ಕಾನತ್ತೂರಿನಲ್ಲಿ ಹೊಸದಾಗಿ ನಿರ್ಮಿಸಲಾದ ಗೋಡೆ ಕುಸಿದು ಇಬ್ಬರು ಸಾವಿಗೀಡಾಗಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಪ್ರಕಾರ, ಮೃತರನ್ನು ಶೇಕ್ ಅಫ್ರಾಜ್ ಮತ್ತು ಎಂಡಿ ತೋಫಿಕ್ ಎಂದು ಗುರುತಿಸಲಾಗಿದೆ.
ಗೋಡೆ ಕುಸಿದಿದ್ದರಿಂದ ಇಬ್ಬರು ಸಾವಿಗೀಡಾಗಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಜಾರ್ಖಂಡ್ ನಿವಾಸಿಗಳೆಂದು ಗುರುತಿಸಲಾಗಿದ್ದು, ಕಾನತ್ತೂರು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಕಟ್ಟಡದೊಳಗೆ ಸಿಲುಕಿದ 10 ಮಂದಿ
ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಚೆನ್ನೈನ ವೆಲಾಚೇರಿ ಪ್ರದೇಶದ ಐದು ಫರ್ಲಾಂಗ್ ರಸ್ತೆ ಜಂಕ್ಷನ್ ಬಳಿ ನಿರ್ಮಾಣ ಹಂತದ ಕಟ್ಟಡಕ್ಕೆ ಸಂಪೂರ್ಣ ನೀರು ತುಂಬಿಕೊಂಡಿದ್ದು, ರಸ್ತೆಗಳೆಲ್ಲಾ ಜಲಾವೃತವಾಗಿವೆ. ಈ ಕಟ್ಟಡದೊಳಗೆ ಕನಿಷ್ಠ 10 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಮಿಚಾಂಗ್ ಚಂಡಮಾರುತ: ತಮಿಳುನಾಡಿನಲ್ಲಿ ಭಾರಿ ಮಳೆ, ರಸ್ತೆಗಳು ಜಲಾವೃತ, ಶಾಲೆಗಳಿಗೆ ರಜೆ, ರೈಲು-ವಿಮಾನ ಸಂಚಾರ ಸ್ಥಗಿತ
ಮೈಚಾಂಗ್ ಚಂಡಮಾರುತದಿಂದಾಗಿ ಚೆನ್ನೈನಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಸದ್ಯ ಚಂಡಮಾರುತ ತೀವ್ರಗೊಳ್ಳುತ್ತಿದ್ದು, ಸೋಮವಾರ ಸಂಜೆ ವೇಳೆಗೆ ಚೆನ್ನೈ ಮತ್ತು ಆಂಧ್ರಪ್ರದೇಶದ ಮಚಲಿಪಟ್ಟಣಂ ನಡುವೆ ಉತ್ತರ ತಮಿಳುನಾಡು ತೀರವನ್ನು ದಾಟುವ ನಿರೀಕ್ಷೆಯಿದೆ. ಭಾನುವಾರ ಬೆಳಗ್ಗೆ 8.30ರಿಂದ ಸೋಮವಾರ ಬೆಳಗಿನ ಜಾವ 3.30ರವರೆಗೆ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಚೆನ್ನೈನಲ್ಲಿ ಸುಮಾರು 12 ಸೆಂಮೀ ಮಳೆ ದಾಖಲಾಗಿದೆ. ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ) ನಿವಾಸಿಗಳು ಹೊರಗೆ ಹೋಗದಂತೆ ಎಚ್ಚರಿಕೆ ನೀಡಿದೆ.
ಮಳೆಯಿಂದಾಗಿ ನಗರದಲ್ಲಿ ವಾಹನಗಳ ಸಂಚಾರಕ್ಕೂ ತೀವ್ರ ತೊಂದರೆಯಾಗಿದೆ. ಚೆನ್ನೈಗೆ ಮತ್ತು ಅಲ್ಲಿಂದ ಹೊರಡುವ ಹಲವಾರು ರೈಲುಗಳು ಮತ್ತು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಉಪನಗರ ರೈಲುಗಳು ಬೆಳಿಗ್ಗೆ 8 ಗಂಟೆಯವರೆಗೆ ಕಾರ್ಯನಿರ್ವಹಿಸಲಿಲ್ಲ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತಿ ಒಂದು ಗಂಟೆಗೆ ರೈಲನ್ನು ಓಡಿಸಲಾಗುತ್ತಿದೆ.