ದೇಶ

ಭಾರತೀಯ ಪ್ರಜಾಪ್ರಭುತ್ವವನ್ನು ವೃತ್ತಿಪರ ಹ್ಯಾಕರ್‌ಗಳಿಂದ ನಿಯಂತ್ರಿಸಲು ಅನುಮತಿಸಬಹುದೇ?: ದಿಗ್ಜಿಜಯ ಸಿಂಗ್

Shilpa D

ನವದೆಹಲಿ: ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಪಕ್ಷ ಪರಾಭವಗೊಂಡಿದೆ, ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮತಯಂತ್ರಗಳ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನಿಸಿದ್ದಾರೆ.

ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲು ಎದುರಾಗಿತ್ತು. ಈ ಪೈಕಿ ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಅಧಿಕಾರ ನಷ್ಟವಾಗಿದೆ. ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಸೋಲಿನ ಬೆನ್ನಲ್ಲೇ ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಸಿಂಗ್ ಪ್ರಶ್ನಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, 'ಚಿಪ್ ಹೊಂದಿರುವ ಯಾವುದೇ ಯಂತ್ರವನ್ನು ಹ್ಯಾಕ್ ಮಾಡಬಹುದು. 2003ರಿಂದಲೇ ಇವಿಎಂ ಮೂಲಕ ಮತದಾನವನ್ನು ನಾನು ವಿರೋಧಿಸುತ್ತಲೇ ಬಂದಿದ್ದೇನೆ' ಎಂದು ಹೇಳಿದ್ದಾರೆ. ಭಾರತೀಯ ಪ್ರಜಾಪ್ರಭುತ್ವವನ್ನು ವೃತ್ತಿಪರ ಹ್ಯಾಕರ್‌ಗಳಿಂದ ನಿಯಂತ್ರಿಸಲು ಅನುಮತಿಸಬಹುದೇ! ಇದು ಎಲ್ಲ ರಾಜಕೀಯ ಪಕ್ಷಗಳು ಗಮನಹರಿಸಬೇಕಾದ ಮೂಲಭೂತ ಪ್ರಶ್ನೆಯಾಗಿದೆ. ಚುನಾವಣಾ ಆಯೋಗ ಮತ್ತು ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ದಯವಿಟ್ಟು ನಮ್ಮ ಭಾರತೀಯ ಪ್ರಜಾಪ್ರಭುತ್ವವನ್ನು ರಕ್ಷಿಸುವೀರಾ' ಎಂದು ಮನವಿ ಮಾಡಿದ್ದಾರೆ.

ಹಿಂದೆ ಇವಿಎಂ ಬಳಕೆಯನ್ನು ಬಿಜೆಪಿ ವಿರೋಧಿಸಿರುವ ಸುದ್ದಿಯನ್ನು ದಿಗ್ವಿಜಯ ಸಿಂಗ್ ಹಂಚಿಕೊಂಡಿದ್ದಾರೆ. ಮಗದೊಂದು ಪೋಸ್ಟ್‌ನಲ್ಲಿ ಜಾಗತಿಕವಾಗಿ ಇವಿಎಂ ಬಳಕೆ ಮಾಡುತ್ತಿರುವ ರಾಷ್ಟ್ರಗಳು, ಬಳಕೆ ಮಾಡದ ದೇಶಗಳು ಮತ್ತು ಒಟ್ಟಾರೆ ವೆಚ್ಚದ ಕುರಿತು ಮಾಹಿತಿ ನೀಡಿದ್ದಾರೆ.

ಇವಿಎಂಗಳು ಹೇಗೆ ಫೂಲ್ ಪ್ರೂಫ್ ಅಲ್ಲ ಮತ್ತು ಪ್ರಜಾಪ್ರಭುತ್ವಕ್ಕೆ  ಅವು ಸುರಕ್ಷಿತವಾಗಿಲ್ಲ ಎಂಬುದನ್ನು ಪತ್ರಕರ್ತ ರವಿ ನಾಯರ್ ವಿವರಿಸಿದ ಲೇಖನವನ್ನು ಸಿಂಗ್ ಉಲ್ಲೇಖಿಸಿದ್ದಾರೆ. ಇವಿಎಂಗಳ ಸಾಮೂಹಿಕ ಟ್ಯಾಂಪರಿಂಗ್ ಸಾಧ್ಯವಿಲ್ಲ ಎಂದು ಅನೇಕ ಜನರು ನಂಬುತ್ತಾರೆ. ಆದರೆ ಶೇ. 3 ರಿಂದ 3.5 ರಷ್ಟು ಟ್ಯಾಂಪರ್ಡ್ ಇವಿಎಂಗಳು ಫಲಿತಾಂಶಗಳನ್ನು ಬದಲಾಯಿಸುತ್ತವೆ. ಯಾವುದೇ ರಾಜಕೀಯ ಪಕ್ಷವು ಚುನಾವಣೆಯಲ್ಲಿ ಗೆದ್ದರೂ, ಇವಿಎಂಗಳು ಪ್ರಜಾಪ್ರಭುತ್ವಕ್ಕೆ ಸುರಕ್ಷಿತವಲ್ಲ ಎಂದು ನಾಯರ್ ತಮ್ಮ ಟ್ವಿಟ್ಟರ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

SCROLL FOR NEXT