ದೇಶ

ಅಬಕಾರಿ ನೀತಿ ಪ್ರಕರಣ: ಮನೀಶ್ ಸಿಸೋಡಿಯಾ ನ್ಯಾಯಾಂಗ ಬಂಧನ ಜನವರಿ 10 ರವರೆಗೆ ವಿಸ್ತರಣೆ

Lingaraj Badiger

ನವದೆಹಲಿ: ರದ್ದಾದ ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಉಪ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ(ಎಎಪಿ) ಹಿರಿಯ ನಾಯಕ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನ ಅವಧಿಯನ್ನು ದೆಹಲಿ ರೋಸ್ ಅವೆನ್ಯೂ ಕೋರ್ಟ್ ಸೋಮವಾರ ಜನವರಿ 10 ರವರೆಗೆ ವಿಸ್ತರಿಸಿದೆ.

ಪ್ರಕರಣದಲ್ಲಿ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಅನುಮತಿ ಕೋರಿ ಇಡಿ ಸಲ್ಲಿಸಿರುವ ಅರ್ಜಿಗೆ ಡಿಸೆಂಬರ್ 10 ರೊಳಗೆ ಉತ್ತರಿಸುವಂತೆ ವಿಶೇಷ ನ್ಯಾಯಾಧೀಶ ಎಂಕೆ ನಾಗ್ಪಾಲ್ ಅವರು ಸಿಸೋಡಿಯಾ ಮತ್ತು ಇತರ ಆರೋಪಿಗಳಿಗೆ ಸೂಚಿಸಿದ್ದಾರೆ.

ಇದೇ ವೇಳೆ 540 ಪುಟಗಳ ಹೆಚ್ಚುವರಿ ದಾಖಲೆಗಳ ಪ್ರತಿಗಳನ್ನು ಆರೋಪಿಗಳಿಗೆ ನೀಡುವಂತೆ ಜಾರಿ ನಿರ್ದೇಶನಾಲಯಕ್ಕೆ(ಇಡಿ) ನ್ಯಾಯಾಲಯ ಸೂಚಿಸಿದೆ.

ಫೆಬ್ರವರಿ 2023 ರಲ್ಲಿ, ದೆಹಲಿಯ ಹೊಸ ಅಬಕಾರಿ ನೀತಿ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿದೆ. ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ ನಂತರ ಈ ನೀತಿಯನ್ನು ಹಿಂಪಡೆಯಲಾಗಿದೆ. 

ಸದ್ಯ ಸಿಸೋಡಿಯಾ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ಎಎಪಿ ನಾಯಕನಿಗೆ ಜಾಮೀನು ನಿರಾಕರಿಸಿದೆ.

SCROLL FOR NEXT