ದೇಶ

2024 ಲೋಕಸಭಾ ಚುನಾವಣೆ: ಇಂದು ಇಂಡಿಯಾ ಮೈತ್ರಿಕೂಟದ ಮಹತ್ವದ ಸಭೆ, ಸೀಟ್ ಹಂಚಿಕೆ, ಕಾರ್ಯತಂತ್ರ ಕುರಿತು ಚರ್ಚೆ

Nagaraja AB

ನವದೆಹಲಿ: ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಹಿನ್ನೆಡೆಯಾದ ನಂತರ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಜಂಟಿ ಪ್ರಚಾರ, ಸೀಟು ಹಂಚಿಕೆ ಮತ್ತು ಕಾರ್ಯತಂತ್ರ ಪುನರ್ ರೂಪಿಸುವ ಕುರಿತು ಇಂಡಿಯಾ ಮೈತ್ರಿಕೂಟದ ಮಹತ್ವದ ಸಭೆ  ಇಂದು ನಡೆಯಲಿದೆ.

ಇಂದಿನ ಸಭೆಯಲ್ಲಿ "ಮೇನ್ ನಹಿಂ, ಹಮ್ (ನಾವು, ನಾನಲ್ಲ)" ಎಂಬ ಥೀಮ್ ನೊಂದಿಗೆ ಮುಂದುವರಿಯಲು ಪ್ರತಿಪಕ್ಷಗಳು ಉದ್ದೇಶಿಸಿವೆ. ಇಲ್ಲಿನ ಅಶೋಕ್ ಹೋಟೆಲ್ ನಲ್ಲಿ ಮಧ್ಯಾಹ್ನ 3 ಗಂಟೆಗೆ ಸಭೆ ನಿಗಧಿಯಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದರು.

ಇಂದು ಪ್ರತಿಪಕ್ಷಗಳ ಒಕ್ಕೂಟದ ನಾಲ್ಕನೇ ಸಭೆಯಾಗಿದೆ. ಜೂನ್ 23 ರಂದು ಪಾಟ್ನಾದಲ್ಲಿ ಮೊದಲ ಸಭೆ ನಡೆದಿತ್ತು. ಜುಲೈ 17-18 ರಂದು ಬೆಂಗಳೂರಿನಲ್ಲಿ 2ನೇ ಸಭೆ ಮತ್ತು ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರ ನಡುವೆ ಮುಂಬೈನಲ್ಲಿ ಮೂರನೇ ಸಭೆ ನಡೆದಿತ್ತು. ಅಲ್ಲಿ 27 ಪಕ್ಷಗಳು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಸ್ಪರ್ಧಿಸಲು ನಿರ್ಣಯಗಳನ್ನು ಅಂಗೀಕರಿಸಿದ್ದವು.

ಈ ಮಧ್ಯೆ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, 2024ರ ಸಾರ್ವತ್ರಿಕ ಚುನಾವಣೆ ನಂತರ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸಲಾಗುವುದು ಎಂದು ಹೇಳಿದರು. ಬಿಜೆಪಿಯನ್ನು ಪ್ರತಿಪಕ್ಷಗಳು ಸೋಲಿಸಲಿವೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವೆ ತ್ರಿಕೋನ ಮೈತ್ರಿ ಸಾಧ್ಯವಾಗಲಿದೆ ಎಂದು  ವಿಶ್ವಾಸ ವ್ಯಕ್ತಪಡಿಸಿದರು.

ವಿಶೇಷವಾಗಿ ಹಿಂದಿ ಬೆಲ್ಟ್‌ನಲ್ಲಿ ಬಿಜೆಪಿಯ ಹೆಚ್ಚುತ್ತಿರುವ ಪ್ರಭಾವ ಕುರಿತು ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, ಹಿಂದಿ ಬೆಲ್ಟ್ ಮತ್ತು ಇತರ ಪ್ರದೇಶಗಳ ನಡುವೆ ತಾರತಮ್ಯ ಮಾಡುವುದಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಇಂಡಿಯಾ ಒಕ್ಕೂಟ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು. 

SCROLL FOR NEXT