ದೇಶ

‘ಎಡಿಟ್ ಮಾಡಿದ ವಿಡಿಯೋ’ ಶೇರ್ ಮಾಡಿದ ಕೆಟಿ ರಾಮರಾವ್‌ಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

Ramyashree GN

ಹೈದರಾಬಾದ್: ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಅವರು ಮಂಗಳವಾರ ವಿಡಿಯೋವೊಂದನ್ನು ಹಂಚಿಕೊಂಡು, ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 

'ಚುನಾವಣೆ ಭರವಸೆಗಳನ್ನು ಅನುಷ್ಠಾನಗೊಳಿಸಲು ಹಣವಿಲ್ಲ ಎಂದು ಕರ್ನಾಟಕದ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಹೇಳಿರುವ' ಉದ್ದೇಶಿತ ವಿಡಿಯೋವನ್ನು ರಾಮರಾವ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

'ಚುನಾವಣೆಯಲ್ಲಿ ಜನರನ್ನು ಯಶಸ್ವಿಯಾಗಿ ವಂಚಿಸಿದ ನಂತರ ತೆಲಂಗಾಣದ ಭವಿಷ್ಯದ ಟೆಂಪ್ಲೇಟ್ ಇದಾಗಿದೆಯೇ? ಆಮಿಷವೊಡ್ಡುವಂತ ಖಾತರಿಗಳನ್ನು ನೀಡುವ ಮೊದಲು ನೀವು ಮೂಲಭೂತ ಸಂಶೋಧನೆ ಮತ್ತು ಯೋಜನೆಯನ್ನು ಮಾಡಬೇಕಲ್ಲವೇ?' ಎಂದು ಕೆಟಿಆರ್ ಪ್ರಶ್ನಿಸಿದ್ದಾರೆ.

ನಕಲಿ ವಿಡಿಯೋ ಹರಿಬಿಡುತ್ತಿದ್ದಾರೆ ಎಂದು ಕೆಟಿಆರ್ ವಿರುದ್ಧ ಸಿದ್ದರಾಮಯ್ಯ ಆರೋಪಿಸಿದ್ದು, 'ತೆಲಂಗಾಣ ಚುನಾವಣೆಯಲ್ಲಿ ನಿಮ್ಮ ಪಕ್ಷ ಏಕೆ ಅಧಿಕಾರ ಕಳೆದುಕೊಂಡಿತು ಗೊತ್ತಾ? ಏಕೆಂದರೆ ಯಾವುದು ನಕಲಿ ಮತ್ತು ಎಡಿಟ್ ಮಾಡಲಾಗಿದೆ ಮತ್ತು ಯಾವುದು ಸತ್ಯ ಎಂದು ಪರಿಶೀಲಿಸುವುದು ಹೇಗೆಂಬುದೇ ನಿಮಗೆ ತಿಳಿದಿಲ್ಲ' ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

'ಬಿಜೆಪಿ ಎಡಿಟ್ ಮಾಡಿದ ನಕಲಿ ವಿಡಿಯೋಗಳನ್ನು ಸೃಷ್ಟಿಸುತ್ತದೆ ಮತ್ತು ಬಿಆರ್‌ಎಸ್ ಅವುಗಳನ್ನು ಪ್ರಸಾರ ಮಾಡುತ್ತದೆ. ನಿಮ್ಮದು ಬಿಜೆಪಿಯ ಪರಿಪೂರ್ಣ ಬಿ ಟೀಂ. ನಿಮಗೆ ಇನ್ನೂ ಸತ್ಯಾಂಶಗಳ ಬಗ್ಗೆ ಆಸಕ್ತಿ ಇದ್ದರೆ, ಇದನ್ನು ಓದಿ' ಎಂದು ಕೆಲವು ಬಿಜೆಪಿ ನಾಯಕರ ಎಡಿಟ್ ವಿಡಿಯೋ ಕುರಿತು ಸಿದ್ದರಾಮಯ್ಯ ತಮ್ಮ ಹೇಳಿಕೆಯ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ.

ಇದೇ ವೇಳೆ ತೆಲಂಗಾಣ ಕಾಂಗ್ರೆಸ್ ಕೂಡ ಕೆಟಿಆರ್ ಅವರ ಟ್ವೀಟ್ ಬಗ್ಗೆ ವಾಗ್ದಾಳಿ ನಡೆಸಿದೆ.

'ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿದ್ದಾಗ ನೀವು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ ಎನ್ನಲಾದ ನಕಲಿ ಪತ್ರವನ್ನು ಪೋಸ್ಟ್ ಮಾಡಿದ್ದೀರಿ. ಈಗ ನೀವು ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ತಪ್ಪು ಮಾಹಿತಿ ಹರಡಲು ಆರಂಭಿಸಿದ್ದೀರಿ. ನೀವು ತಪ್ಪು ಮಾಹಿತಿ ಹರಡುವ ಮೂಲಕವೇ ಬದುಕುತ್ತಿದ್ದೀರಿ ಎಂಬುದನ್ನು ತೆಲಂಗಾಣ ಜನರು ಅರ್ಥ ಮಾಡಿಕೊಂಡಿದ್ದಾರೆ ಮತ್ತು ಅದಕ್ಕಾಗಿಯೇ ಅವರು ನಿಮ್ಮನ್ನು ಫಾರ್ಮ್‌ಹೌಸ್‌ನಲ್ಲಿ ಕುಳಿತುಕೊಳ್ಳಲು ಶಾಕ್ ಟ್ರೀಟ್ಮೆಂಟ್ ನೀಡಿದ್ದಾರೆ. ನೀವಿನ್ನೂ ಬದಲಾಗುವುದಿಲ್ಲವೇ' ಎಂದು ಪ್ರಶ್ನಿಸಿದೆ.

SCROLL FOR NEXT