ನವದೆಹಲಿ: ರಾಜ್ಯಸಭೆ ಕಲಾಪವನ್ನು ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ. ಸಂಸತ್ತಿನ ಭದ್ರತಾ ಉಲ್ಲಂಘನೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗಾಗಿ ಪ್ರತಿಪಕ್ಷ ಸಂಸದರು ಇಂದು ಕೂಡ ಒತ್ತಡ ಮುಂದುವರಿಸಿದ್ದಾರೆ.
ಸಂಸತ್ತಿನ ಮೇಲ್ಮನೆಯಿಂದ 45 ಸಂಸದರನ್ನು ನಿನ್ನೆ ಅಮಾನತುಗೊಳಿಸಲಾಗಿದ್ದು, ಉಳಿದ ಸದಸ್ಯರು ಇಂದು ಮತ್ತೆ ಕಲಾಪ ಆರಂಭವಾದಾಗ ಅದನ್ನು ಪ್ರಸ್ತಾಪಿಸಿದರು. ದಿಗ್ವಿಜಯ್ ಸಿಂಗ್ ಮತ್ತು ದೀಪೇಂದರ್ ಹೂಡಾ ಸೇರಿದಂತೆ ಕಾಂಗ್ರೆಸ್ ಕೆಲ ಸದಸ್ಯರು, ಟಿಎಂಸಿ ಮತ್ತು ಡಿಎಂಕೆಯ ಕೆಲವು ಸಂಸದರು ರಾಜ್ಯಸಭೆಯಲ್ಲಿ ಹಾಜರಿದ್ದರು.
ಕಲಾಪ ಆರಂಭದ ವೇಳೆಗೆ ಅಧಿಕೃತ ಪಟ್ಟಿ ಮಾಡಲಾದ ಕಾಗದ ಪತ್ರಗಳನ್ನು ಮೇಜಿನ ಮೇಲೆ ಇಡುತ್ತಿದ್ದಂತೆಯೇ ಸದಸ್ಯರು ಎದ್ದು ನಿಂತು ಘೋಷಣೆಗಳನ್ನು ಕೂಗುತ್ತಾ ಅಮಿತ್ ಶಾ ಅವರು ಸದನಕ್ಕೆ ಬಂದು ಭದ್ರತಾ ಲೋಪದ ಕುರಿತು ಹೇಳಿಕೆ ನೀಡುವಂತೆ ಒತ್ತಾಯಿಸಿದರು.
ಸಭಾಪತಿ ಜಗದೀಪ್ ಧನಕರ್ ಅವರು ಯಾರೊಬ್ಬರಿಗೂ ಮಾತನಾಡಲು ಅವಕಾಶ ನೀಡಲಿಲ್ಲ ಮತ್ತು ನಿಯಮ 267 ರ ಅಡಿಯಲ್ಲಿ ಅವರು ಸ್ವೀಕರಿಸಿದ ನಾಲ್ಕು ನೋಟಿಸ್ಗಳು ಪ್ರವೇಶಕ್ಕೆ ಅರ್ಹವಲ್ಲ ಎಂದು ಘೋಷಿಸಿದರು.