ದೇಶ

ಕರ್ನಾಟಕ ಭವನ ಕಟ್ಟಡ ಪುನರ್ ನಿರ್ಮಾಣ: 2024 ಜೂನ್ ಒಳಗೆ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

Ramyashree GN

ನವದೆಹಲಿ: ಇಲ್ಲಿನ ಮುಖ್ಯ ಕರ್ನಾಟಕ ಭವನ ಕಟ್ಟಡದ ಪುನರ್ ನಿರ್ಮಾಣ ಕಾಮಗಾರಿಯನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಪರಿಶೀಲಿಸಿದ್ದು, ಮುಂದಿನ ವರ್ಷ ಜೂನ್ ಒಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದೆಹಲಿಯ ಚಾಣಕ್ಯಪುರಿ ಪ್ರದೇಶದ ಕೌಟಿಲ್ಯ ಮಾರ್ಗದಲ್ಲಿರುವ ಕರ್ನಾಟಕ ಭವನದ ಮುಖ್ಯ ಕಟ್ಟಡದ ಸಿವಿಲ್ ಕಾಮಗಾರಿ ಕೊನೆಯ ಹಂತದಲ್ಲಿದೆ.

ಮೂಲಗಳ ಪ್ರಕಾರ, 2024ರ ಜೂನ್ ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಕರ್ನಾಟಕ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಅಂದಾಜು 80-85 ಕೋಟಿ ರೂ. ವೆಚ್ಚದಲ್ಲಿ ಕಟ್ಟಡದ ಪುನರ್ನಿರ್ಮಾಣ ಕಾರ್ಯವು 2020ರಲ್ಲಿ ಪ್ರಾರಂಭವಾಯಿತು. ಈ ಯೋಜನೆಯು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ಕೋವಿಡ್-19 ಸಾಂಕ್ರಾಮಿಕ ಮತ್ತು ದೆಹಲಿ ಸರ್ಕಾರದ ಮಾಲಿನ್ಯ ನಿರ್ಬಂಧಗಳಿಂದಾಗಿ ಕೆಲಸ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.

ಇದರಿಂದಾಗಿ ಯೋಜನೆಯ ವೆಚ್ಚ ಈಗ 120 ಕೋಟಿ ರೂ. ಗೆ ಏರಿಕೆಯಾಗಿದೆ ಎಂದು ತಿಳಿಸಿವೆ.

ಕಾಮಗಾರಿ ಪರಿಶೀಲನೆ ವೇಳೆ ರೆಸಿಡೆಂಟ್ ಕಮಿಷನರ್ ಇಂಕೊಂಗ್ಲಾ ಜಮೀರ್, ಹೆಚ್ಚುವರಿ ರೆಸಿಡೆಂಟ್ ಕಮಿಷನರ್ ಕೃತಿ ಬನ್ಸಾಲ್, ಕರ್ನಾಟಕ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿ. ಅನಂತ, ಸಹಾಯಕ ಎಂಜಿನಿಯರ್ ಎನ್ಎಲ್ ಶರತ್ ಕುಮಾರ್ ಮತ್ತು ವಾಸ್ತುಶಿಲ್ಪಿ ಉದಯ್ ಭಟ್ ಇದ್ದರು.

SCROLL FOR NEXT