ನವದೆಹಲಿ: ಸಂಸತ್ ಭದ್ರತಾ ಲೋಪ ಪ್ರಕರಣದ ಆರೋಪಿ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಅವರ ಶೂಗಳನ್ನು ಹೊಗೆ ಡಬ್ಬಿ ಅಳವಡಿಸುವುದಕ್ಕಾಗಿ ಮಾರ್ಪಡಿಸಿದ "ಸೈಕ್ಲಿಸ್ಟ್ ಚಮ್ಮಾರ"ನ ಪತ್ತೆಗೆ ದೆಹಲಿ ಪೊಲೀಸರು, ಉತ್ತರ ಪ್ರದೇಶ ಪೊಲೀಸರ ಸಹಾಯ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಮ್ಮಾರನನ್ನು ಪ್ರಕರಣದಲ್ಲಿ ಸಾಕ್ಷಿಯನ್ನಾಗಿ ಮಾಡಲು ಪೊಲೀಸರು ಬಯಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಾಗರ್ ಅವರು ಮೊದಲು ಶೂಗಳನ್ನು ಮಾರ್ಪಡಿಸಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ನಂತರ ಸೈಕಲ್ ನಲ್ಲಿ ಲಖನೌ ಅಲಂಬಾಗ್ಗೆ ಬಂದಿದ್ದ ಚಮ್ಮಾರನನ್ನು ಸಂಪರ್ಕಿಸಿ, ಶೂಗಳನ್ನು ಮಾರ್ಪಡಿಸಲಾಗಿದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನು ಓದಿ: ಸಂಸತ್ತಿನಲ್ಲಿ ಭದ್ರತಾ ಲೋಪ: ಸುಳ್ಳು ಪತ್ತೆ ಪರೀಕ್ಷೆಗೆ ಅನುಮತಿ ಕೋರಿ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಮೊರೆ
ಈ ತಿಂಗಳ ಆರಂಭದಲ್ಲಿ ಚಮ್ಮಾರನನ್ನು ಹುಡುಕಲು ದೆಹಲಿ ಪೊಲೀಸರ ತಂಡ ಲಖನೌಗೆ ಭೇಟಿ ನೀಡಿತ್ತು.
ಡಿಸೆಂಬರ್ 13 ರಂದು ಲೋಕಸಭೆ ಕಲಾಪ ನಡೆಯುತ್ತಿದ್ದ ವೇಳೆ ಸಾರ್ವಜನಿಕ ಗ್ಯಾಲರಿಯಿಂದ ಕೆಳಗೆ ಜಿಗಿದ ಸಾಗರ್ ಮತ್ತು ಮನೋರಂಜನ್, ತಮ್ಮ ಶೂಗಳಲ್ಲಿದ್ದ ಹೊಗೆ ಡಬ್ಬಿಗಳನ್ನು ತೆಗೆದು ಹಳದಿ ಬಣ್ಣದ ಹೊಗೆ ಬಿಡುಗಡೆ ಮಾಡಿದ್ದರು ಮತ್ತು ಘೋಷಣೆಗಳನ್ನು ಕೂಗಿದ್ದರು.
ಈ ಆರೋಪಿಗಳು ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಂದ ಸಂದರ್ಶಕರ ಪಾಸ್ಗಳನ್ನು ಪಡೆದು ಸಂಸತ್ ಪ್ರವೇಶ ಮಾಡಿದ್ದರು.