ಲಖನೌ: ಕೆಲವೊಮ್ಮೆ ದಿಢೀರ್ ಭೇಟಿ ನೀಡುವ ಮೂಲಕ ಅಚ್ಚರಿಸುವಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಯೋಧ್ಯೆ ಪ್ರವಾಸದ ವೇಳೆಯೂ ಇಂತಹುದೇ ಭೇಟಿ ಮೂಲಕ ಅಚ್ಚರಿ ಮೂಡಿಸಿದರು.
ಉಚಿತ ಅಡುಗೆ ಅನಿಲ ಸಂಪರ್ಕ ನೀಡುವ ಯೋಜನೆಯಾದ ಉಜ್ವಲ ಯೋಜನೆಯ 10ನೇ ಕೋಟಿ ಫಲಾನುಭವಿ ಮೀರಾ ಮಾಂಝಿ ಅವರ ನಿವಾಸಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಆ ಕುಟುಂಬದೊಂದಿಗೆ ಒಂದು ಕಪ್ ಚಹಾ ಸೇವಿಸಿದ್ದಾರೆ. ಅಲ್ಲದೇ, ಜನವರಿ 22 ರಂದು ನಡೆಯಲಿರುವ ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಅವರಿಗೆ ಆಹ್ವಾನ ನೀಡಿದರು.
ಮೋದಿ ಅವರ ದಿಢೀರ್ ಭೇಟಿಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮೀರಾ, ಪ್ರಧಾನಿ ತಮ್ಮ ಮನೆಗೆ ಬರುತ್ತಿದ್ದಾರೆ ಎಂಬುದು ನನಗೆ ತಿಳಿದಿರಲಿಲ್ಲ. ಅವರ ಭೇಟಿಗೂ ಒಂದು ಗಂಟೆ ಮುಂಚಿತವಾಗಿ, ರಾಜಕೀಯ ನಾಯಕರೊಬ್ಬರು ಬರುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದರು. ಅವರು ಬಂದರು, ನನ್ನ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದರು. ಉಜ್ವಲ ಯೋಜನೆಯಲ್ಲಿ ಸಿಗುತ್ತಿರುವ ಪ್ರಯೋಜನಗಳ ಬಗ್ಗೆ ಕೇಳಿದರು. ನಂತರ ಅವರು ಏನು ಅಡುಗೆ ಮಾಡಿದ್ದೇಯಾ ಎಂದು ಕೇಳಿದರು. ಅನ್ನ, ದಾಲ್ ಮತ್ತು ಚಹಾ ಮಾಡಿರುವುದಾಗಿ ಹೇಳಿದೆ. ನಂತರ ಚಳಿಗಾಲದ ಟೀ ಕೊಡಬೇಕು, ಚಹಾ ಸ್ವಲ್ಪ ಸಿಹಿಯಾಗಿರುತ್ತದೆ ಎಂದು ಹೇಳಿದರು. ಹೇಗೆ ಚಹಾವನ್ನು ತಯಾರಿಸುತ್ತೇನೆ ಎಂದು ಅವರಿಗೆ ಹೇಳಿದೆ ಎಂದು ಮೀರಾ ಮಾಂಝಿ ಲವಲವಿಕೆಯಿಂದ ಹೇಳಿದರು. ಅವಳ ಕಣ್ಣುಗಳಲ್ಲಿ ಸಂತೋಷ ಉಕ್ಕಿ ಬರುತಿತ್ತು.
ಇದನ್ನೂ ಓದಿ: ಜನವರಿ 22ರಂದು ನಡೆಯಲಿರುವ ಶ್ರೀರಾಮನ ಪ್ರಾಣ ಪ್ರತಿಷ್ಠಾನ ಸಮಾರಂಭಕ್ಕಾಗಿ ಇಡೀ ಜಗತ್ತು ಕಾಯುತ್ತಿದೆ: ಪ್ರಧಾನಿ ಮೋದಿ
"ಪ್ರಧಾನಿ ಅವರನ್ನು ನೋಡಿ ತುಂಬಾ ಸಂತೋಷವಾಯಿತು. ಅವರ ಆವಾಸ್ ಯೋಜನೆಯಲ್ಲಿ ಮನೆ ಸಿಕ್ಕಿದೆ ಎಂದು ಹೇಳಿದೆ. ನಮಗೂ ನೀರು ಸಿಗುತ್ತಿದ್ದು, ಈಗ ಗ್ಯಾಸ್ ನಲ್ಲಿ ಅಡುಗೆ ಮಾಡುತ್ತಿದ್ದೇನೆ. ಇದರಿಂದ ಸಂತೋಷವಾಗಿದೆ. ಇದರಿಂದ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಸಮಯ ಉಳಿತಾಯ ವಾಗುತ್ತದೆ ಎಂದು ಅವರು ಹೇಳಿದರು.
ಪ್ರಧಾನಿ ಮೋದಿ, ರೈಲ್ವೆ ನಿಲ್ದಾಣವನ್ನು ಉದ್ಘಾಟಿಸಿ ಹಿಂದಿರುಗುವಾಗ ಮೀರಾ ಮಾಂಝಿ ಅವರ ಮನೆಗೆ ಭೇಟಿ ನೀಡಿದರು. ಮೀರಾ ಕುಟುಂಬ ಅವರ ಪಾದಗಳನ್ನು ಮುಟ್ಟಿತು. ಆದರೆ, ಪ್ರಧಾನಿಯವರು, ದಯವಿಟ್ಟು ಇದನ್ನು ಮಾಡಬೇಡಿ ಎಂದು ಅವರನ್ನು ತಡೆದರು. 10 ಕೋಟಿ ಕುಟುಂಬಗಳಿಗೆ ಗ್ಯಾಸ್ ಸಿಲಿಂಡರ್ ನೀಡಿದ್ದೇವೆ. 10ನೇ ಕೋಟಿ ಫಲಾನುಭವಿ ಭೇಟಿ ಮಾಡಲು ಬಂದಿರುವುದಾಗಿ ಮೋದಿ ತಿಳಿಸಿದರು.