ದೇಶ

ರಾಜ್ಯಸಭೆ: 'ಮೋದಿ-ಅದಾನಿ ಭಾಯಿ ಭಾಯಿ'; ವಿಪಕ್ಷಗಳ ಘೋಷಣೆ ನಡುವೆ ಪ್ರಧಾನಿ ಭಾಷಣ, ಖರ್ಗೆಗೆ ತಿರುಗೇಟು

Nagaraja AB

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾಜ್ಯಸಭೆಯಲ್ಲಿ  ಮಾತನಾಡಲು ಆರಂಭಿಸುತ್ತಿದ್ದಂತೆ ವಿಪಕ್ಷಗಳ ಸಂಸದರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಅದಾನಿ ವಿಚಾರದಲ್ಲಿ ಜಂಟಿ ಸಂಸದೀಯ ಸಮಿತಿ  ರಚಿಸುವಂತೆ ಒತ್ತಾಯಿಸಿದರು. ಮೋದಿ ಅದಾನಿ ಭಾಯಿ ಭಾಯಿ ಎನ್ನುವ ಘೋಷಣೆಗಳೊಂದಿಗೆ ಕಲಾಪಕ್ಕೆ ಅಡ್ಡಿಪಡಿಸಿದರು.

'ನಾನಿಲ್ಲಿ ಸದನದಲ್ಲಿ ಮಾತನಾಡ್ತಿದ್ದರೆ, ಮೋದಿ ನನ್ನ ಕ್ಷೇತ್ರಕ್ಕೆ ಹೋಗಿ ಬಂದಿದ್ದಾರೆ ಎಂದು ಬುಧವಾರ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ದ ಮಲ್ಲಿಕಾರ್ಜುನ್‌ ಖರ್ಗೆಗೆ ತಿರುಗೇಟು ನೀಡಿದರು. 

ಮಲ್ಲಿಕಾರ್ಜುನ್‌ ಖರ್ಗೆ ಅವರ ರಾಜ್ಯವಾದ ಕರ್ನಾಟಕದಲ್ಲಿ 1.70 ಕೋಟಿ ಜನಧನ್‌ ಖಾತೆಗಳಾಗಿವೆ. ಸ್ವತಃ ಖರ್ಗೆ ಅವರ ಕ್ಷೇತ್ರ ಕಲಬುರಗಿಯಲ್ಲಿ 8 ಲಕ್ಷ ಜನ್‌ಧನ್‌ ಖಾತೆ ತೆರೆಯಲಾಗಿದೆ. ಹೀಗೆಲ್ಲಾ ಇದ್ದಾಗ ಅವರು ಸೋತಿರುವುದಕ್ಕೆ ಬೇಸರವಾಗಿ ಅವರು ಆ ಮಾತನ್ನು ಆಡಿದ್ದಾರೆ ಎಂದು ಲೇವಡಿ ಮಾಡಿದರು.  ಕಾಂಗ್ರೆಸ್ ನಾಯಕರ ಕಣ್ಣೀರಿಗೆ ದೇಶದ ಜನತೆ ಬೆಲೆ ಕೊಡುತ್ತಿಲ್ಲ. ಮಡಿಕೆಯಲ್ಲಿಯೂ ಕಮಲ ಅರಳುತ್ತದೆ ಎಂಬುದನ್ನು ವಿಪಕ್ಷ ಸದಸ್ಯರಿಗೆ ಹೇಳಲು ಬಯಸುತ್ತೇನೆ ಎಂದರು. 

ದೇಶದಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಒಂಬತ್ತು ವರ್ಷಗಳಲ್ಲಿ ದೇಶಾದ್ಯಂತ 48 ಕೋಟಿ ಜನ್ ಧನ್ ಖಾತೆ ತೆರೆಯಲಾಗಿದೆ. ದೇಶದಲ್ಲಿ  25 ಕೋಟಿ ಕುಟುಂಬಗಳಿಗೆ ಎಲ್ ಪಿಜಿ ಅನಿಲ ಸಂಪರ್ಕ ಒದಗಿಸಲಾಗಿದೆ.ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಸುಮಾರು 11 ಕೋಟಿ ಮನೆಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ  ಎಂದು ಪ್ರಧಾನಿ ತಿಳಿಸಿದರು. 

ಸರ್ಕಾರದ ಹಲವು ಜನಪರ ಯೋಜನೆಗಳು ಅರ್ಹ ಫಲಾನುಭವಿಗಳನ್ನು ತಲುಪಿವೆ. ತಂತ್ರಜ್ಞಾನದ ನೆರವಿನಿಂದ ಕೆಲಸ ಮಾಡುತ್ತಿದ್ದು, ಸಾಮಾನ್ಯ ಜನರಿಗೆ ಆದ್ಯತೆ ನೀಡಿದ್ದೇವೆ.  ಕಾಂಗ್ರೆಸ್ ಗರೀಬಿ ಹಠಾವೋ ಘೋಷಣೆ ಮಾಡಿ ನಾಲ್ಕು ದಶಕ ಕಳೆದರೂ ಏನನ್ನು ಮಾಡಲಿಲ್ಲ. ದೇಶದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ.  ಸಬ್ ಕಾ ಸಾಥ್ ಸಬ್ ಕಾ  ವಿಕಾಸ್  ಕೇಂದ್ರ ಸರ್ಕಾರದ ಸಂಕಲ್ಪವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. 

SCROLL FOR NEXT