ಪಣಜಿ: ಗೋವಾದಲ್ಲಿ ಕಿಡ್ನಾಪ್ ಹೈಡ್ರಾಮಾವೊಂದು ಬೆಳಕಿಗೆ ಬಂದಿದ್ದು, ಹೈದರಾಬಾದ್ನ ಇಬ್ಬರು ವ್ಯಕ್ತಿಗಳನ್ನು ಸುಲಿಗೆಗಾಗಿ ಒತ್ತೆಯಾಳಾಗಿ ಇರಿಸಿಕೊಂಡಿದ್ದ 11 ಮಂದಿ ಆರೋಪಿಗಳನ್ನು ಗೋವಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗೋವಾ ಅಪಹರಣ: ಇತ್ತೀಚೆಗೆ ಗೋವಾದಿಂದ ಅಪಹರಣ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇಲ್ಲಿ ಹೈದರಾಬಾದ್ನ ಇಬ್ಬರು ವ್ಯಕ್ತಿಗಳನ್ನು ಸುಲಿಗೆಗಾಗಿ ಒತ್ತೆಯಾಳಾಗಿ ಇರಿಸಲಾಗಿತ್ತು. ಈ ಅಪಹರಣ ಪ್ರಕರಣದಲ್ಲಿ ತುರ್ತು ಕಾರ್ಯಾಚರಣೆ ನಡೆಸಿದ್ದ ಗೋವಾ ಪೊಲೀಸರು 11 ಮಂದಿಯನ್ನು ಬಂಧಿಸಿದ್ದಾರೆ. ಈ ವಿಷಯದ ಬಗ್ಗೆ ಮಾಹಿತಿ ನೀಡಿರುವ ಉತ್ತರ ಗೋವಾ ಎಸ್ಪಿ ನಿಧಿನ್ ವಲ್ಸನ್ ಅವರು, 'ಹೈದರಾಬಾದ್ ಪೊಲೀಸರಿಂದ ಇಬ್ಬರನ್ನು ಒತ್ತೆಯಾಳಾಗಿಸಿಕೊಂಡಿರುವ ಬಗ್ಗೆ ಮಾಹಿತಿ ಬಂದಿದೆ. ಮಾಹಿತಿ ಪಡೆದ ತಕ್ಷಣ ಗೋವಾ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಇಬ್ಬರು ಸಂತ್ರಸ್ತರನ್ನು ಅಪಹರಣಕಾರರಿಂದ ರಕ್ಷಿಸಿದ್ದಾರೆ. ಆರೋಪಿಗಳು ಇಬ್ಬರ ಕುಟುಂಬಗಳಿಂದ ಸುಲಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಹೇಳಿದ್ದಾರೆ.
11 ಜನರ ಬಂಧನ
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿರುವ ಗೋವಾ ಪೊಲೀಸರು 11 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಆರೋಪಿಗಳು ತಮ್ಮ ಉದ್ಯೋಗದಾತರೊಂದಿಗಿನ ವಿವಾದದ ನಂತರ ಸಂತ್ರಸ್ತರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎನ್ನಲಾಗಿದೆ. ಅಪಹರಣಕ್ಕೊಳಗಾದ ಇಬ್ಬರು ಹೈದರಾಬಾದ್ ನಿವಾಸಿಗಳೆಂದು ತಿಳಿದುಬಂದಿದ್ದು, ಪ್ರಸ್ತುತ ಅವರನ್ನು ಪೊಲೀಸರು ಸರಕ್ಷಿತವಾಗಿ ಬಿಡುಗಡೆಗೊಳಿಸಿದ್ದಾರೆ ಎಂದು ಹೇಳಿದ್ದಾರೆ.
ಅಂತೆಯೇ ಈ ಸಂಬಂಧ ಹೈದರಾಬಾದ್ನಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನಿಧಿನ್ ವಲ್ಸನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆರೋಪಿಗಳು ದೂರುದಾರ ಜೈರಾಮ್ ಕುಮಾರ್ ಅವರೊಂದಿಗೆ ಗಣಿಗಾರಿಕೆ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕೆಲವು ವಿವಾದಗಳನ್ನು ಹೊಂದಿದ್ದರು, ನಂತರ ಅವರು ತಮ್ಮ ಇಬ್ಬರು ಉದ್ಯೋಗಿಗಳನ್ನು ಗೋವಾಕ್ಕೆ ಕರೆಸಿ ಒತ್ತೆಯಾಳಾಗಿ ಇರಿಸಿದರು ಮತ್ತು ಅವರನ್ನು ಬಿಡುಗಡೆ ಮಾಡಲು ಕುಮಾರ್ನಿಂದ 4 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹೈದರಾಬಾದ್ ಪೊಲೀಸರಿಂದ ಮಾಹಿತಿ ಪಡೆದ ನಂತರ, ಗೋವಾ ಪೊಲೀಸರು ತಂಡವನ್ನು ರಚಿಸಿದರು ಮತ್ತು ಗೋವಾದ ರಾಜಧಾನಿ ಪಣಜಿ ಬಳಿಯ ಬಾಂಬೋಲಿಮ್ ಪ್ರದೇಶದಲ್ಲಿ ಆರೋಪಿಯನ್ನು ಪತ್ತೆ ಮಾಡಿದರು. ಪಿಎಫ್ಐಗೆ ಸಂಪರ್ಕ ಹೊಂದಿರುವ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಪಾಕಿಸ್ತಾನದ ರಾಯಭಾರ ಕಚೇರಿಯಲ್ಲಿ ಐಎಸ್ಐ ಗೂಢಚಾರರಿಗೆ ಚೀನಾ ಗಡಿ ಕುರಿತು ಮಾಹಿತಿ ನೀಡುತ್ತಿದ್ದ ಯೋಧನ ಸೆರೆ!
ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ನೊಂದಿಗೆ ಪ್ರಕರಣದ ಪ್ರಮುಖ ಆರೋಪಿಗಳ ಸಂಪರ್ಕದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ನಿಧಿನ್ ವಲ್ಸನ್ ಹೇಳಿದ್ದಾರೆ. ವಿವರವಾದ ತನಿಖೆಗಾಗಿ ಎಲ್ಲಾ ಆರೋಪಿಗಳನ್ನು ಹೈದರಾಬಾದ್ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಅವರು ಹೇಳಿದರು.