ದೇಶ

ದೆಹಲಿ ಮಹಾನಗರ ಪಾಲಿಕೆಯಲ್ಲಿ ಹಿಂಸಾಚಾರಕ್ಕೆ ಎಎಪಿ 'ವಿಲನ್' ಅತಿಶಿ ಕಾರಣ: ಬಿಜೆಪಿ

Lingaraj Badiger

ನವದೆಹಲಿ: ಎಎಪಿ ಶಾಸಕ ಅತಿಶಿ ಅವರನ್ನು "ಖಳನಾಯಕಿ" ಎಂದು ಕರೆದಿರುವ ಬಿಜೆಪಿ, ದೆಹಲಿ ಮಹಾನಗರ ಪಾಲಿಕೆ(ಎಂಸಿಡಿ)ಯ ಆರು ಸದಸ್ಯರ ಸ್ಥಾಯಿ ಸಮಿತಿ ಚುನಾವಣೆ ವೇಳೆ ಸದನದಲ್ಲಿ ನಡೆದ ಗಲಾಟೆಗೆ ಆಪ್ ಶಾಸಕಿಯೇ ಕಾರಣ ಎಂದು ಶನಿವಾರ ತರಾಟೆಗೆ ತೆಗೆದುಕೊಂಡಿದೆ.

ದೆಹಲಿ ಮೇಯರ್ ಶೆಲ್ಲಿ ಒಬೆರಾಯ್ ಅವರೊಂದಿಗೆ ಆಮ್ ಆದ್ಮಿ ಪಕ್ಷದ(ಎಎಪಿ) ಶಾಸಕರಾದ ಅತಿಶಿ ಮತ್ತು ದುರ್ಗೇಶ್ ಪಾಠಕ್ ಅವರ ಮಾರ್ಫ್ ಮಾಡಿದ ಚಿತ್ರಗಳಿರುವ ಅಣಕು ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿರುವ ದೆಹಲಿ ಬಿಜೆಪಿ, "ಸದನದಲ್ಲಿ ಹಿಂಸಾಚಾರ ನಡೆಸಿದ್ದು ಮತ್ತು ಸರ್ವಾಧಿಕಾರಿ ರೀತಿ ವರ್ತಿಸಿದ್ದು ಎಎಪಿಯ 'ಖಳನಾಯಕ'ರು ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದೆ.

ಈ ಬಗ್ಗೆ ಶಾಸಕಿಯಿಂದ ಅಥವಾ ಎಎಪಿಯಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ಹೌಸ್ ಬಿಜೆಪಿ ಕೌನ್ಸಿಲರ್‌ಗಳ ಭಾರೀ ಪ್ರತಿಭಟನೆಗೆ ಸಾಕ್ಷಿಯಾದ ನಂತರ ಚುನಾವಣೆಯ ಸಮಯದಲ್ಲಿ ಚಲಾಯಿಸಿದ ಮತವನ್ನು "ಅಸಿಂಧು" ಎಂದು ಘೋಷಿಸಲಾಗಿದೆ.

ಶುಕ್ರವಾರ ಪ್ರಮುಖ ಆರು ಸದಸ್ಯರ ಸ್ಥಾಯಿ ಸಮಿತಿಗೆ ನಡೆದ ಚುನಾವಣೆ ವೇಳೆ ಮೇಯರ್ ಶೆಲ್ಲಿ ಒಬೆರಾಯ್ ಒಂದು ಮತವನ್ನು ಅಸಿಂಧುಗೊಳಿಸುತ್ತಿದ್ದಂತೆಯೇ  ಉಭಯ ಪಕ್ಷಗಳ ಕೌನ್ಸಿಲರ್ ಗಳು ಕೂಗಾಟದ ನಡುವೆ ಪರಸ್ಪರ ತಳ್ಳಾಟ, ನೂಕಾಟ ನಡೆದು ಹೊಡೆದಾಡಿಕೊಂಡಿದ್ದಾರೆ. 

SCROLL FOR NEXT