ದೇಶ

ರಾಮಗಢ ಉಪಚುನಾವಣೆಗೂ ಮುನ್ನ 35 ವರ್ಷದ ಕಾಂಗ್ರೆಸ್ ಮುಖಂಡನನ್ನು ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು

Ramyashree GN

ರಾಮಗಢ: ಉಪಚುನಾವಣೆಗೆ ಎರಡು ದಿನ ಮುಂಚಿತವಾಗಿ, ಜಾರ್ಖಂಡ್‌ನ ರಾಮಗಢದಲ್ಲಿ 35 ವರ್ಷದ ಕಾಂಗ್ರೆಸ್ ಮುಖಂಡನನ್ನು ಮೋಟಾರ್‌ ಸೈಕಲ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯ ರಾಜಧಾನಿ ರಾಂಚಿಯಿಂದ ಸುಮಾರು 50 ಕಿಮೀ ದೂರದಲ್ಲಿರುವ ಸೌಂದ ಪ್ರದೇಶದ ಭುರ್ಕುಂದ-ಪತ್ರಾಟು ರಸ್ತೆಯಲ್ಲಿರುವ ಹಳೆಯ ಪೆಟ್ರೋಲ್ ಪಂಪ್ ಬಳಿ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತರನ್ನು ರಾಜ್ ಕಿಶೋರ್ ಬೌರಿ ಅಲಿಯಾಸ್ ಬಿಟ್ಕಾ ಬೌರಿ ಎಂದು ಗುರುತಿಸಲಾಗಿದ್ದು, ಅವರು ಬಾರ್ಕಗಾಂವ್‌ನ ಕಾಂಗ್ರೆಸ್ ಶಾಸಕ ಅಂಬಾ ಪ್ರಸಾದ್ ಅವರ ಪತ್ರಾಟು ಬ್ಲಾಕ್ ಪ್ರತಿನಿಧಿಯಾಗಿದ್ದರು.

ಗುಂಡಿನ ದಾಳಿಗೊಳಗಾಗಿದ್ದ ಬೌರಿ ಅವರನ್ನು ಕೂಡಲೇ ಭುರ್ಕುಂಡದ ಸಿಸಿಎಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆ ವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಅಧಿಕಾರಿ ಹೇಳಿದರು.

'ಈ ಸಂಬಂಧ ತನಿಖೆಯನ್ನು ಪ್ರಾರಂಭಿಸಿದ್ದೇವೆ ಮತ್ತು ಅಪರಾಧದಲ್ಲಿ ಭಾಗಿಯಾದ ವ್ಯಕ್ತಿಗಳನ್ನು ಕಂಡುಹಿಡಿಯಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ' ಎಂದು ಭುರ್ಕುಂದ ಪೊಲೀಸ್ ಠಾಣೆಯ ಉಸ್ತುವಾರಿ ಅಮಿತ್ ಕುಮಾರ್ ಹೇಳಿದ್ದಾರೆ.

ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಪೆಟ್ರೋಲ್ ಪಂಪ್ ಬಳಿ ಕುಳಿತಿದ್ದ ಬೌರಿ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಗಮನಾರ್ಹ ಸಂಗತಿಯೆಂದರೆ, ಫೆಬ್ರುವರಿ 16 ರಂದು ರಾಮಗಢದಲ್ಲಿ ಅಪರಿಚಿತ ಬಂದೂಕುಧಾರಿಗಳು ಎಜೆಎಸ್‌ಯು ಪಕ್ಷದ ನಾಯಕರೊಬ್ಬರನ್ನು ಗುಂಡಿಕ್ಕಿ ಕೊಂದಿದ್ದರು.

ರಾಮಗಢ ವಿಧಾನಸಭಾ ಕ್ಷೇತ್ರಕ್ಕೆ ಫೆಬ್ರುವರಿ 27 ರಂದು ಉಪಚುನಾವಣೆ ನಡೆಯಲಿದ್ದು, ಮಾರ್ಚ್ 2 ರಂದು ಮತ ಎಣಿಕೆ ನಡೆಯಲಿದೆ.

SCROLL FOR NEXT