ದೇಶ

ಅಬಕಾರಿ ನೀತಿ ಹಗರಣ: ಸಿಸೋಡಿಯಾ ಜಾಮೀನು ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ನಲ್ಲಿ ಸಲ್ಲಿಸುವಂತೆ ಸಲಹೆ

Srinivasamurthy VN

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಸಿಬಿಐನಿಂದ ಬಂಧನಕ್ಕೀಡಾಗಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ತೀವ್ರ ಹಿನ್ನಡೆಯಾಗಿದ್ದು, ಜಾಮೀನು ಅರ್ಜಿ ವಿಚಾರಣೆ ತನ್ನಲ್ಲಿ ಸಾಧ್ಯವಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದೆ.

ದೆಹಲಿ ಅಬಕಾರಿ ಹಗರಣ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಈ ಪ್ರಕರಣದಲ್ಲಿ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು 5 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. ಕಾಂಗ್ರೆಸ್ ನಾಯಕ ಮತ್ತು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಸಿಸೋಡಿಯಾ ಪರ ಸುಪ್ರೀಂ ಕೋರ್ಟ್ ನಲ್ಲಿ ಬಂಧನದ ವಿರುದ್ಧ ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (ಸಿಜೆಐ ಡಿವೈ ಚಂದ್ರಚೂಡ್) ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರ ಪೀಠವು ವಿಚಾರಣೆ ನಡೆಸಿತು. 

ಈ ವೇಳೆ ಸಿಜೆಐ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು- 'ನೀವು ಹೈಕೋರ್ಟ್‌ಗೆ ಹೋಗಬೇಕಿತ್ತು, ನೀವು ನೇರವಾಗಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಏಕೆ ಕೇಳುತ್ತಿದ್ದೀರಿ' ಎಂದು ಪ್ರಶ್ನಿಸಿದರು. ಮೊದಲು ಜಾಮೀನಿಗಾಗಿ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗುವಂತೆ ನ್ಯಾಯಾಲಯ ಸಿಸೋಡಿಯಾಗೆ ಸಲಹೆ ನೀಡಿದೆ. ಸಿಜೆಐ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು- 'ನೀವು ಸುಪ್ರೀಂ ಕೋರ್ಟ್‌ನಿಂದ ನೇರವಾಗಿ ಜಾಮೀನು ಏಕೆ ಕೋರುತ್ತಿದ್ದೀರಿ. ಆರ್ಟಿಕಲ್ 32 ರ ಅಡಿಯಲ್ಲಿ ನೀವು ಇಲ್ಲಿಗೆ ಏಕೆ ಬಂದಿದ್ದೀರಿ? ಇದು ಒಳ್ಳೆಯ ಮತ್ತು ಆರೋಗ್ಯಕರ ಸಂಪ್ರದಾಯವಲ್ಲ ಎಂದು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು.

ನಾನು ಕೇವಲ 3 ನಿಮಿಷ ಮಾತನಾಡುತ್ತೇನೆ: ಸಿಂಘ್ವಿ
ಇನ್ನು ಸುಪ್ರೀಂ ಕೋರ್ಟ್ ನಲ್ಲಿ ಮನೀಶ್ ಸಿಸೋಡಿಯಾ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿಂಘ್ವಿ ಅವರು, 'ನನಗೆ ಕೇವಲ 3 ನಿಮಿಷ ಮಾತನಾಡಲು ಅವಕಾಶ ನೀಡಿ. ಸಿಸೋಡಿಯಾರನ್ನು ಎರಡು ಬಾರಿ ಮಾತ್ರ ವಿಚಾರಣೆಗೆ ಕರೆಯಲಾಗಿತ್ತು. ಬಂಧನಕ್ಕೂ ಮುನ್ನ ಅರ್ನೇಶ್ ಕುಮಾರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಪಾಲಿಸಿಲ್ಲ. ಸಿಸೋಡಿಯಾ ಮೇಲೆ ಸಾಕ್ಷ್ಯಾಧಾರಗಳನ್ನು ತಿರುಚಿರುವ ಆರೋಪವೂ ಇಲ್ಲ, ಹೀಗಾಗಿ ಅವರು ತಪ್ಪಿಸಿಕೊಳ್ಳುವ ಸಾಧ್ಯತೆ ಇಲ್ಲ ಎಂದು ವಾದ ಮಂಡಿಸಿದರು.

"ಹೈಕೋರ್ಟ್‌ಗೆ ಹೋಗಿ, ನಾವು ಕೇಳುವುದಿಲ್ಲ"
ಸಿಂಘ್ವಿ ವಾದ ಆಲಿಸಿದ ಬಳಿಕವೂ ಕೋರ್ಟ್, ಅರ್ಜಿಯನ್ನು ನಿಯಮಗಳ ಪ್ರಕಾರವೇ ಸಲ್ಲಿಸಬೇಕು. ಈ ಬಗ್ಗೆ ಸಿಜೆಐ ಅವರು ಈ ವಿಷಯಗಳು ನಿಜವಾಗಬಹುದು, ಆದರೆ ಸುಪ್ರೀಂ ಕೋರ್ಟ್ ನೇರವಾಗಿ ಕೇಳಲು ಸಾಧ್ಯವಿಲ್ಲ ಎಂದು ಹೇಳಿದರು. ನ್ಯಾಯಮೂರ್ತಿ ನರಸಿಂಹ ಅವರು ವಿಷಯ ದೆಹಲಿಗೆ ಸಂಬಂಧಿಸಿದ್ದು, ನೀವು ನೇರವಾಗಿ ಸುಪ್ರೀಂ ಕೋರ್ಟ್‌ಗೆ ಬರಬಾರದು ಎಂದಲ್ಲ ಎಂದು ಹೇಳಿದರು.

ಅಂತೆಯೇ ಸುಪ್ರೀಂ ಕೋರ್ಟ್ ಮೂಲಭೂತ ಹಕ್ಕುಗಳ ರಕ್ಷಕ ಎಂದು ಸಿಂಘ್ವಿ ಹೇಳಿದ್ದಾರೆ. ಆದರೆ ಪ್ರಕರಣ ಯಾವ ಸೆಕ್ಷನ್‌ನಲ್ಲಿದೆ ಎಂದು ಸಿಜೆಐ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿಂಘ್ವಿ ಇದು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 ರ ಅಡಿಯಲ್ಲಿದೆ ಎಂದು ಹೇಳಿದರು. ಆಗ ನ್ಯಾಯಮೂರ್ತಿಗಳು ನೀವು ಏನೇ ಹೇಳುತ್ತಿದ್ದೀರೋ ಅದನ್ನು ಹೈಕೋರ್ಟ್‌ಗೆ ಹೇಳಿ.. ನಾವು ಕೇಳುವುದಿಲ್ಲ ಎಂದು ಸಿಜೆಐ ಹೇಳಿದರು. 

SCROLL FOR NEXT