ದೇಶ

ದೆಹಲಿ ಅಬಕಾರಿ ನೀತಿ ಹಗರಣ: ಸಿಬಿಐ ಬಂಧನ ಪ್ರಶ್ನಿಸಿದ ಮನೀಶ್ ಸಿಸೋಡಿಯಾ; ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

Ramyashree GN

ನವದೆಹಲಿ: ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಸಿಸೋಡಿಯಾ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ ನೇತೃತ್ವದ ಸುಪ್ರೀಂ ಕೋರ್ಟ್ ಪೀಠದ ಮುಂದೆ ತುರ್ತು ವಿಚಾರಣೆಗಾಗಿ ಮನವಿಯನ್ನು ಪ್ರಸ್ತಾಪಿಸಿದರು. 

ಆರಂಭದಲ್ಲಿ, ಮುಖ್ಯ ನ್ಯಾಯಮೂರ್ತಿಗಳು ಸಿಂಘ್ವಿಗೆ ಈ ಸಂಬಂಧ ಹೈಕೋರ್ಟ್‌ಗೆ ಹೋಗಬಹುದು ಎಂದು ಹೇಳಿದರು. ಆದರೆ, ಹಿರಿಯ ವಕೀಲರು ತುರ್ತು ವಿಚಾರಣೆಗೆ ಒತ್ತಾಯಿಸಿದರು.

ಮಂಗಳವಾರ, ಪಟ್ಟಿಮಾಡಲಾಗಿರುವ ಎಲ್ಲಾ ವಿಚಾರಣೆಗಳು ಮುಗಿದ ನಂತರ ಕೊನೆಯಲ್ಲಿ ಸುಪ್ರೀಂ ಕೋರ್ಟ್ ಈ ವಿಷಯವನ್ನು ಆಲಿಸಲಿದೆ ಎಂದು ಸಿಜೆಐ ಹೇಳಿದರು.

ಇದೀಗ ರದ್ದುಗೊಂಡಿರುವ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ದೆಹಲಿ ನ್ಯಾಯಾಲಯವು ಸಿಸೋಡಿಯಾ ಅವರನ್ನು ಐದು ದಿನಗಳ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ.

ರೂಸ್ ಅವೆನ್ಯೂ ಕೋರ್ಟ್‌ನ ವಿಶೇಷ ನ್ಯಾಯಾಧೀಶ ಎಂ.ಕೆ. ನಾಗ್ಪಾಲ್, ಎರಡೂ ಕಡೆಯ ವಾದಗಳ ನಂತರ ತಮ್ಮ ಆದೇಶವನ್ನು ಕಾಯ್ದಿರಿಸಿದರು. ಎಎಪಿ ನಾಯಕನನ್ನು ಮಾರ್ಚ್ 4 ರವರೆಗೆ ಸಿಬಿಐ ಕಸ್ಟಡಿಗೆ ಕಳುಹಿಸುವ ಆದೇಶವನ್ನು ಪ್ರಕಟಿಸಿದರು.

ಎಂಟು ಗಂಟೆಗಳ ವಿಚಾರಣೆ ಬಳಿಕ ಸಿಬಿಐ ಭಾನುವಾರ ಸಿಸೋಡಿಯಾ ಅವರನ್ನು ಬಂಧಿಸಿದೆ.

ಕೇಂದ್ರೀಯ ತನಿಖಾ ಸಂಸ್ಥೆಯ ಪರವಾಗಿ ಹಾಜರಾದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪಂಕಜ್ ಗುಪ್ತಾ, 'ಅಬಕಾರಿ ನೀತಿಯಲ್ಲಿ ಬದಲಾವಣೆ ಮತ್ತು ವ್ಯತ್ಯಾಸವನ್ನು ತರಲು ಹೊಸ ಕ್ಯಾಬಿನೆಟ್ ಟಿಪ್ಪಣಿಯನ್ನು ಹಾಕುವಂತೆ ಸಿಸೋಡಿಯಾ ಮೌಖಿಕವಾಗಿ ಕಾರ್ಯದರ್ಶಿಗೆ ಸೂಚಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಅವರು ಅಬಕಾರಿ ನೀತಿಗಾಗಿ ಸಂಪುಟದಿಂದ ರಚಿಸಲಾಗಿದ್ದ ಸಚಿವರ ಗುಂಪಿನ ಮುಖ್ಯಸ್ಥರಾಗಿದ್ದರು ಎಂದಿದ್ದಾರೆ. 

'ಲಾಭದ ಮಾರ್ಜಿನ್ ಅನ್ನು ಶೇ 5 ರಿಂದ ಶೇ 12 ಕ್ಕೆ ಹೆಚ್ಚಿಸಲಾಗಿದೆ. ಈ ಬದಲಾವಣೆಗಳನ್ನು ಏಕೆ ಮಾಡಲಾಗಿದೆ ಎಂಬುದನ್ನು ಅವರು ವಿವರಿಸಲು ಸಾಧ್ಯವಾಗಲಿಲ್ಲ' ಎಂದಿದ್ದಾರೆ.

SCROLL FOR NEXT