ಗಾಜಿಯಾಬಾದ್: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಂಗಳವಾರ ತಮ್ಮ ಸಹೋದರ ರಾಹುಲ್ ಗಾಂಧಿಯನ್ನು 'ಯೋಧ' ಎಂದು ಕರೆದಿದ್ದಾರೆ ಮತ್ತು ಅವರ ಇಮೇಜ್ ಅನ್ನು ನಾಶಮಾಡಲು ಸಾವಿರಾರು ಕೋಟಿ ಖರ್ಚು ಮಾಡಿದ ಸರ್ಕಾರದ ಶಕ್ತಿಗೆ ಅವರು ಹೆದರುವುದಿಲ್ಲ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ದೆಹಲಿಯಿಂದ ಉತ್ತರ ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆ ಲೋನಿ ಗಡಿಯಲ್ಲಿ ಸ್ವಾಗತಿಸಿದ ಅವರು, ಅದಾನಿ ಮತ್ತು ಅಂಬಾನಿಯಂತಹ ದೊಡ್ಡ ಕೈಗಾರಿಕೋದ್ಯಮಿಗಳು ಅನೇಕ ರಾಜಕಾರಣಿಗಳು, ಪಿಎಸ್ಯುಗಳು ಮತ್ತು ಮಾಧ್ಯಮಗಳನ್ನು ಖರೀದಿಸಿರಬಹುದು. ಆದರೆ, 'ಅವರು ಎಂದಿಗೂ, ಯಾವುದೇ ಕಾರಣಕ್ಕೂ ನನ್ನ ಸೋದರನನ್ನು ಖರೀದಿಸಲು ಸಾಧ್ಯವಾಗುವುದಿಲ್ಲ' ಎಂದಿದ್ದಾರೆ.
'ಚಳಿಗಾಲದಲ್ಲೂ ರಾಹುಲ್ ಗಾಂಧಿಗೆ ಚಳಿಯಾಗುತ್ತಿಲ್ಲ ಎಂದು ಜನರು ಹೇಳುತ್ತಾರೆ. ಇದಕ್ಕೆ ಕಾರಣ 'ಅವರು ಸತ್ಯದ ಗುರಾಣಿಯನ್ನು ಧರಿಸಿದ್ದಾರೆ' ಎಂದು ಪ್ರಿಯಾಂಕ ಹೇಳಿದರು.
ಇದನ್ನೂ ಓದಿ: ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆ: ಕುಟುಂಬ ಸದಸ್ಯರೊಂದಿಗೆ ರಾಹುಲ್ ಹೆಜ್ಜೆ; ಕುಟುಂಬ ರಾಜಕಾರಣ ಎಂದ ನೆಟ್ಟಿಗರು!
ಯಾತ್ರೆಯ ವೇಳೆ ದೆಹಲಿಯ ಚಳಿಗಾಲದಲ್ಲೂ ನಿರಂತರವಾಗಿ ಬಿಳಿ ಟೀ ಶರ್ಟ್ ಮಾತ್ರ ಧರಿಸಿದ್ದ ರಾಹುಲ್ ಗಾಂಧಿ, ಮಾಧ್ಯಮಗಳು ಮತ್ತು ರಾಜಕಾರಣಿಗಳ ಕಣ್ಣಿಗೆ ಅವರಿಗೆ ಏಕೆ ಚಳಿ ಆಗುತ್ತಿಲ್ಲ ಎಂದು ಆಶ್ಯರ್ಯಚಕಿತರನ್ನಾಗಿ ಮಾಡಿದೆ.
ಕನ್ಯಾಕುಮಾರಿಯಿಂದ 3,000 ಕಿ.ಮೀ ಕ್ರಮಿಸಿ ಉತ್ತಪ ಪ್ರದೇಶವನ್ನು ಪ್ರವೇಶಿಸಿದ ಯಾತ್ರೆಯನ್ನು ಸ್ವಾಗತಿಸಲು ಹೆಮ್ಮೆಪಡುತ್ತೇನೆ ಎಂದು ಪ್ರಿಯಾಂಕಾ ಹೇಳಿದ್ದಾರೆ.
'ನನ್ನ ಅಣ್ಣನನ್ನು ನೋಡಿ ನಾನು ಗರಿಷ್ಠ ಹೆಮ್ಮೆಪಡುತ್ತೇನೆ. ಏಕೆಂದರೆ, ಆಡಳಿತದಲ್ಲಿರುವ ಸರ್ಕಾರವು ತನ್ನ ಎಲ್ಲಾ ಒತ್ತಡವನ್ನು ಹಾಕಿತು. ಆತನ ಇಮೇಜ್ ಅನ್ನು ನಾಶಮಾಡಲು ಸಾವಿರಾರು ಕೋಟಿಗಳನ್ನು ಖರ್ಚು ಮಾಡಿದೆ. ಆದರೆ, ರಾಹುಲ್ ಗಾಂಧಿ ಸತ್ಯದ ಹಾದಿಯಿಂದಾಗಿ ಯಾವುದಕ್ಕೂ ಹಿಂಜರಿಯಲಿಲ್ಲ. ಏಜೆನ್ಸಿಗಳನ್ನು ನಿಯೋಜಿಸಲಾಗಿದೆ. ಆದರೆ, ಆತ ಯೋಧನಾಗಿರುವುದರಿಂದ ಭಯಪಡಲಿಲ್ಲ' ಎಂದು ಅವರು ಇಲ್ಲಿನ ಲೋನಿ ಗಡಿಯಲ್ಲಿ ಹೇಳಿದರು.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ಬ್ಯುಸಿಯಾಗಿದ್ದ ರಾಹುಲ್; ಹಿಮಾಚಲ ಪ್ರದೇಶದಲ್ಲಿ ಮೋಡಿ ಮಾಡಿದ ಪ್ರಿಯಾಂಕಾ ಗಾಂಧಿ
'ಅದಾನಿ ಜೀ, ಅಂಬಾನಿ ಜೀ ದೊಡ್ಡ ರಾಜಕಾರಣಿಗಳನ್ನು ಕರೆತಂದರು, ಎಲ್ಲಾ ಪಿಎಸ್ಯುಗಳನ್ನು, ಮಾಧ್ಯಮಗಳನ್ನು ಖರೀದಿಸಿದರು. ಆದರೆ, ಅವರು ನನ್ನ ಸಹೋದರನನ್ನು ಖರೀದಿಸಲು ಸಾಧ್ಯವಿಲ್ಲ ಮತ್ತು ಎಂದಿಗೂ ಹಾಗೆ ಮಾಡಲು ಆಗುವುದೇ ಇಲ್ಲ. ನಾನು ಆತನ ಬಗ್ಗೆ ಮತ್ತು ಎಲ್ಲರ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಅವರು ಹೇಳಿದರು.
ಉತ್ತರ ಪ್ರದೇಶದ ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪ್ರಿಯಾಂಕಾ, 'ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯನ್ನು ಹರಡಲು ರಾಹುಲ್ 'ಅಂಗಡಿ' ತೆರೆದಿದ್ದಾರೆ ಮತ್ತು ಜನರನ್ನು ಒಗ್ಗೂಡಿಸಲು ಪಾದಯಾತ್ರೆ ನಡೆಸುತ್ತಿದ್ದಾರೆ. ಉತ್ತರ ಪ್ರದೇಶದ ಪ್ರತಿಯೊಬ್ಬರಿಗೂ ಈ 'ಮೊಹಬ್ಬತ್ ಕಿ ದುಕಾನ್' (ಪ್ರೀತಿಯನ್ನು ಹರಡುವ ಅಂಗಡಿ) ನ ಫ್ರಾಂಚೈಸಿಯನ್ನು ತೆರೆಯುವಂತೆ ನಾನು ಒತ್ತಾಯಿಸುತ್ತೇನೆ' ಎಂದು ಹೇಳಿದರು.