ದೇಶ

ಜಲ ಸಂರಕ್ಷಣೆಯಲ್ಲಿ ಸರ್ಕಾರದ ಪ್ರಯತ್ನ ಜೊತೆಗೆ ಜನರ ಸಕ್ರಿಯ ಪಾಲ್ಗೊಳ್ಳುವಿಕೆ ಕೂಡ ಮುಖ್ಯ: ಪ್ರಧಾನಿ ನರೇಂದ್ರ ಮೋದಿ

Sumana Upadhyaya

ನವದೆಹಲಿ: ಜಲ ಸಂರಕ್ಷಣೆಯ ಪ್ರಯತ್ನಗಳಲ್ಲಿ ಜನರ ಸಹಭಾಗಿತ್ವದ ಮಹತ್ವವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಒತ್ತಿ ಹೇಳಿದ್ದಾರೆ. ಕೇವಲ ಸರ್ಕಾರದ ಪ್ರಯತ್ನ ಮಾತ್ರ ಸಾಕಾಗುವುದಿಲ್ಲ ಎಂದಿದ್ದಾರೆ. 

ರಾಜ್ಯಗಳ ಜಲ ಸಂಪನ್ಮೂಲ ಸಚಿವರ ಮೊದಲ ರಾಷ್ಟ್ರೀಯ ಸಮ್ಮೇಳನದಲ್ಲಿ ಇಂದು ವರ್ಚುವಲ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಜಲ ರಾಜ್ಯಗಳ ನಡುವೆ ಸಹಕಾರ, ಸಹಯೋಗ ಮತ್ತು ಸಮನ್ವಯದ ವಿಷಯವಾಗಿರಬೇಕು. ವೇಗವಾಗಿ ಬೆಳೆಯುತ್ತಿರುವ ನಗರೀಕರಣವನ್ನು ಗಮನದಲ್ಲಿಟ್ಟುಕೊಂಡು ಮೊದಲೇ ಯೋಜನೆ ಹಾಕಿಕೊಳ್ಳಬೇಕು ಎಂದು ರಾಜ್ಯದ ಜಲಸಂಪನ್ಮೂಲ ಸಚಿವರಿಗೆ ಕಿವಿಮಾತು ಹೇಳಿದರು. 

ಭಾರತದಲ್ಲಿ ಹಲವು ರಾಜ್ಯಗಳ ಮಧ್ಯೆ ದಶಕಗಳಿಂದ ನೀರು ಹಂಚಿಕೆಯ ವಿವಾದಗಳು ಹಾಗೆಯೇ ಉಳಿದುಕೊಂಡಿವೆ. ಇಂತಹ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳ ಹೇಳಿಕೆಗಳು ಪ್ರಾಮುಖ್ಯತೆ ಹೊಂದಿವೆ. 

ನರೇಗಾ ಯೋಜನೆ ಅಡಿಯಲ್ಲಿ ಜಲ ಸಂರಕ್ಷಣೆ, ನೀರನ್ನು ಪಡೆಯಲು ಹೆಚ್ಚಿನ ಕೆಲಸವನ್ನು ಮಾಡಬೇಕು ಎಂದು ನಾನು ಭಾವಿಸುತ್ತೇನೆ. ಅದರ ಸಂರಕ್ಷಣೆಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಪ್ರಧಾನಿ ಕರೆ ನೀಡಿದರು. 

ಕೈಗಾರಿಕೆ, ಬೇಸಾಯ, ಕೃಷಿ ಕ್ಷೇತ್ರಗಳಲ್ಲಿ ನೀರಿನ ಬಳಕೆ ಹೆಚ್ಚಾಗಿರುತ್ತದೆ. ಈ ಕ್ಷೇತ್ರದಲ್ಲಿರುವವರಿಗೆ ಜಾಗೃತಿ ಮೂಡಿಸಬೇಕು, ಬೆಳೆ ವೈವಿಧ್ಯತೆ ಮತ್ತು ನೈಸರ್ಗಿಕ ಕೃಷಿಯನ್ನು ಹೆಚ್ಚೆಚ್ಚು ಜಾರಿಗೆ ತರಬೇರು ಎಂದರು. 

ಜಲಮೂಲಗಳನ್ನು ಕಲುಷಿತಗೊಳಿಸುವುದನ್ನು ತಡೆಯಲು ತ್ಯಾಜ್ಯ ನಿರ್ವಹಣೆ ಮತ್ತು ಒಳಚರಂಡಿ ಸಂಸ್ಕರಣೆಗೆ ಕೆಲಸ ಮಾಡಲು ರಾಜ್ಯಗಳನ್ನು ಒತ್ತಾಯಿಸಿದ ಪ್ರಧಾನಿ ಮೋದಿ, 'ನಮಾಮಿ ಗಂಗೆ' ಯೋಜನೆಯನ್ನು ಮಾದರಿಯಾಗಿ ಬಳಸಬೇಕು ಎಂದು ಹೇಳಿದರು. 
ಯಾವುದೇ ಕಾರ್ಯಕ್ರಮದಲ್ಲಿ ಜನರ ಪಾಲ್ಗೊಳ್ಳುವಿಕೆ ಅವರಲ್ಲಿ ಮಾಲೀಕತ್ವದ ಭಾವನೆಯನ್ನು ಬೆಳೆಸುತ್ತದೆ, ಅದು ಯಶಸ್ಸಿನ ಕೀಲಿಯಾಗಿದೆ ಎಂದು ಅವರು ಹೇಳಿದರು.

'ಸ್ವಚ್ಛ ಭಾರತ’ ಅಭಿಯಾನವೇ ಇದಕ್ಕೆ ಯಶಸ್ವಿ ಉದಾಹರಣೆ ಎಂದು ಮೋದಿ ಹೇಳಿದರು. 'ವಾಟರ್ ವಿಷನ್@2047' ವಿಷಯದ ಮೇಲೆ ಅಖಿಲ ಭಾರತ ಜಲ ಮಂತ್ರಿಗಳ ಸಭೆಯು ಪ್ರಮುಖ ನೀತಿ ನಿರೂಪಕರನ್ನು ಒಟ್ಟುಗೂಡಿಸಿ "ಸುಸ್ಥಿರ ಅಭಿವೃದ್ಧಿಗಾಗಿ ಜಲ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮಾರ್ಗಗಳನ್ನು" ಚರ್ಚಿಸುತ್ತದೆ ಎಂದು ಸರ್ಕಾರ ಹೇಳಿದೆ. ಕೇಂದ್ರ ಜಲಶಕ್ತಿ ಸಚಿವಾಲಯವು ಜಲಸಂರಕ್ಷಣೆ, ಸಂಪನ್ಮೂಲ ಕುರಿತ ರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಆಯೋಜಿಸುತ್ತಿದೆ.

SCROLL FOR NEXT