ದೇಶ

ಕೇರಳದಲ್ಲಿ ಭೀಕರ ರಸ್ತೆ ಅಪಘಾತ: ಕಾರು-ಲಾರಿ ನಡುವೆ ಡಿಕ್ಕಿ, ಐವರು ಯುವಕರು ದುರ್ಮರಣ

Manjula VN

ಅಲಪ್ಪುಳ: ಆಲಪ್ಪುಳದ ಅಂಬಲಪ್ಪುಳದಲ್ಲಿ ಎನ್‌ಎಚ್ 66 ರ ಕಕ್ಕಾಝಂ ರೈಲು ಮೇಲ್ಸೇತುವೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರು-ಲಾರಿ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಐವರು ಯುವಕರು ದುರ್ಮರಣವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.

ಮೃತರನ್ನು ಪ್ರಸಾದ್, ಶಾಜುದಾಸ್, ಸಚಿನ್ ಮತ್ತು ಸುಮೋದ್, ಅಮಲ್ ಎಂದು ಗುರ್ತಿಸಲಾಗಿದೆ. ಪ್ರಸಾದ್, ಶಾಜುದಾಸ್, ಸಚಿನ್ ಮತ್ತು ಸುಮೋದ್ ತಿರುವನಂತಪುರಂನ ಅಲತ್ತೂರ್ ನಿವಾಸಿಗಳಾಗಿದ್ದು, ಅಮಲ್ ಕೊಲ್ಲಂನ ಮನ್ರೋತುರುತ್ ಮೂಲದವರಾಗಿದ್ದಾರೆಂದು ತಿಳಿದುಬಂದಿದೆ.

ಎಲ್ಲರೂ ಇಸ್ರೋದ ಕ್ಯಾಂಟೀನ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಕೊಚ್ಚಿಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಐವರು ತೆರಳಿದ್ದರು. ಲಾರಿ ಕೊಲ್ಲಂ ಕಡೆಗೆ ಹೋಗುತ್ತಿತ್ತು ಎಂದು ಅಂಬಲಪ್ಪುಳ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರು ಅಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

SCROLL FOR NEXT