ದೇಶ

ಕೊಯಮತ್ತೂರು ಡಿಐಜಿ ಆತ್ಮಹತ್ಯೆ: ಮಾನಸಿಕ ಖಿನ್ನತೆಯೇ ಕಾರಣ, ಪ್ರಾಥಮಿಕ ತನಿಖೆಯಲ್ಲಿ ಬಹಿರಂಗ

Nagaraja AB

ಕೊಯಮತ್ತೂರು: ಕೊಯಮತ್ತೂರು ವೃತ್ತದ ಪೊಲೀಸ್ ಉಪ ಮಹಾನಿರೀಕ್ಷಕ (ಡಿಐಜಿ) ಸಿ ವಿಜಯಕುಮಾರ್ ಅವರು ಇಂದು ಬೆಳಗ್ಗೆ ನಗರದ ರೆಡ್‌ಫೀಲ್ಡ್ಸ್‌ನಲ್ಲಿರುವ ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ  ಸುಮಾರು 45 ವರ್ಷ ವಯಸ್ಸಾಗಿತ್ತು.

ಕೊಯಮತ್ತೂರು ನಗರದ ರೆಡ್ ಫೀಲ್ಡ್ಸ್‌ನಲ್ಲಿರುವ ಅವರ ಕ್ವಾರ್ಟರ್ಸ್‌ನಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದ ಅವರು,ಬೆಳಗ್ಗೆ 6.15ರ ಸುಮಾರಿಗೆ ತಮ್ಮ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರ ಸಾವಿಗೆ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ.

ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಅವರ ಮನೆಯಲ್ಲಿ ಮೊಕ್ಕಾಂ ಹೂಡಿದ್ದಾರೆ. ವಿಜಯಕುಮಾರ್ ಜನವರಿ 6, 2023 ರಂದು ಕೊಯಮತ್ತೂರು ಶ್ರೇಣಿಯ ಪೊಲೀಸ್ ಉಪ ಮಹಾನಿರೀಕ್ಷಕರಾಗಿ (ಡಿಐಜಿ) ಅಧಿಕಾರ ವಹಿಸಿಕೊಂಡಿದ್ದರು.

2009ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ವಿಜಯಕುಮಾರ್ ಅವರು ಕಾಂಚೀಪುರಂ, ಕಡಲೂರು, ನಾಗಪಟ್ಟಣಂ ಮತ್ತು ತಿರುವರೂರು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಕೊನೆಯ ಪೋಸ್ಟಿಂಗ್ ಚೆನ್ನೈನಲ್ಲಿದ್ದು, ಅಲ್ಲಿ ಅವರು ಅಣ್ಣಾನಗರದ ಉಪ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದರು.

SCROLL FOR NEXT