ದೇಶ

ಬಜರಂಗದಳದ ಸದಸ್ಯನ ಮೇಲೆ ಹಲ್ಲೆ ಆರೋಪ: ಪಾದ್ರಿ ಸೇರಿದಂತೆ ಮೂವರ ಬಂಧನ

Nagaraja AB

ಲಖನೌ: ಮತಾಂತರ ವಿರುದ್ಧ ಪ್ರಚಾರ ನಡೆಸುತ್ತಿದ್ದಾರೆ ಎಂದು ಬಜರಂಗದಳದ  ಸದಸ್ಯನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪಾದ್ರಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

ಮಂಗಳವಾರ ರಾತ್ರಿ 10.30 ರ ಸುಮಾರಿಗೆ ಕಾಕ್ರಿ ಗ್ರಾಮದಿಂದ ಬಂಜಾರಿಯಾಕ್ಕೆ ಹಿಂತಿರುಗುತ್ತಿದ್ದಾಗ ಪಾದ್ರಿ ಅನಿಲ್ ಮತ್ತಿತರರು ದೊಣ್ಣೆ ಮತ್ತು ರಾಡ್‌ಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ದೀಪನ್ಶು ಶ್ರೀವಾಸ್ತವ ಅಲಿಯಾಸ್ ದೀಪಕ್ ನನ್ಪಾರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪವಿತ್ರಾ ಮೋಹನ್ ತ್ರಿಪಾಠಿ ತಿಳಿಸಿದ್ದಾರೆ. .

 ದೀಪಕ್ ನೀಡಿರುವ ದೂರಿನ ಮೇರೆಗೆ ಅನಿಲ್, ರಾಮ್ ನಾರಾಯಣ್, ರೋಹಿತ್ ಮೌರ್ಯ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಎಸ್‌ಪಿ ಹೇಳಿದ್ದಾರೆ.ಎಫ್‌ಐಆರ್‌ನಲ್ಲಿ ಹೆಸರಿಸಲಾದ ಮೂವರನ್ನು ಬಂಧಿಸಲಾಗಿದೆ ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬನನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಶ್ರೀವಾಸ್ತವ ಬಜರಂಗದಳದ 'ವಿಭಾಗ್ ಸಂಯೋಜಕ ಆಗಿದ್ದಾರೆ. 

ಕಳೆದ ತಿಂಗಳು ಹಿಂದೂ ದೇವರುಗಳ  ನಿಂದನೆ ಮತ್ತು  ಮತಾಂತರಕ್ಕಾಗಿ ಗ್ರಾಮಸ್ಥರಿಗೆ ಆಮಿಷ ಒಡ್ಡಿದ ಆರೋಪದ ಮೇಲೆ ಪಾದ್ರಿ ಅನಿಲ್ ಸೇರಿದಂತೆ ಆರು ಜನರ ವಿರುದ್ಧ ದೂರು ದಾಖಲಿಸಿದ ಶ್ರೀವಾಸ್ತವ,  ಕ್ರಿಶ್ಚಿಯನ್ ಮಿಷನರಿಗಳಿಂದ ಧಾರ್ಮಿಕ ಮತಾಂತರ ತಡೆಯಲು ಕೆಲಸ ಮಾಡುತ್ತಿದ್ದೆ. ಅದಕ್ಕಾಗಿಯೇ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT