ದೇಶ

ಕೇರಳ ಪ್ರೊಫೆಸರ್‌ ಕೈ ಕತ್ತರಿಸಿದ ಪ್ರಕರಣ: 5 PFI ಕಾರ್ಯಕರ್ತರು ದೋಷಿಗಳು ಎಂದ ಕೋರ್ಟ್

Srinivasamurthy VN

ಕೊಚ್ಚಿನ್: ಕೇರಳದ ಪ್ರೊಫೆಸರ್‌ ಜೊಸೆಫ್ ಅವರ ಕೈ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿ PFI ಕಾರ್ಯಕರ್ತರ ವಿರುದ್ಧದ ಆರೋಪ ಸಾಬೀತಾಗಿದ್ದು, ಕೋರ್ಟ್ ದೋಷಿಗಳು ಎಂದು ತೀರ್ಪು ನೀಡಿದೆ.

ಕೊಚ್ಚಿಯಲ್ಲಿರುವ ರಾಷ್ಟ್ರೀಯ ತನಿಖಾ ದಳ (NIA) ಕೋರ್ಟ್‌ ಐವರನ್ನು ದೋಷಿಗಳೆಂದು ತೀರ್ಪು ನೀಡಿದ್ದು, ಉಳಿದ ಐವರು ಆರೋಪಿಗಳನ್ನು ಪ್ರಕರಣದಿಂದ ಖುಲಾಸೆ ಮಾಡಿದೆ. ಪ್ರಕರಣದ ಎರಡನೇ ಹಂತದ ವಿಚಾರಣೆಯಲ್ಲಿ ವಿಶೇಷ ಎನ್‌ಐಎ ನ್ಯಾಯಾಲಯದ ನ್ಯಾಯಾಧೀಶ ಅನಿಲ್ ಕೆ ಭಾಸ್ಕರ್ ಅವರು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಕೊಲೆ ಯತ್ನ, ಪಿತೂರಿ ಮತ್ತು ಇತರ ವಿವಿಧ ಅಪರಾಧಗಳಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿದರು. ಅಂತೆಯೇ ಶಿಕ್ಷೆಯ ಪ್ರಮಾಣವನ್ನು ಮುಂದಿನ ವಿಚಾರಣೆಯಲ್ಲಿ ಘೋಷಿಸುವುದಾಗಿ ಕೋರ್ಟ್ ಹೇಳಿದೆ.

ಮೊದಲ ಹಂತದಲ್ಲಿ, 31 ಆರೋಪಿಗಳು ವಿಚಾರಣೆಯನ್ನು ಎದುರಿಸಿದ್ದರು ಮತ್ತು ಅವರಲ್ಲಿ, ನ್ಯಾಯಾಲಯವು ಏಪ್ರಿಲ್ 2015 ರಲ್ಲಿ ಯುಎಪಿಎ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಐಪಿಸಿ ಅಡಿಯಲ್ಲಿ 10 ಅಪರಾಧಗಳಿಗೆ ಶಿಕ್ಷೆ ವಿಧಿಸಿತು ಮತ್ತು ಅಪರಾಧಿಗಳಿಗೆ ಆಶ್ರಯ ನೀಡಿದ ಇತರ ಮೂವರು ತಪ್ಪಿತಸ್ಥರೆಂದು ತೀರ್ಪು ನೀಡಿತು. ಆಗ ಈ ಪ್ರಕರಣದಲ್ಲಿ 18 ಮಂದಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು. ಜುಲೈ 4, 2010 ರಂದು ಇಡುಕ್ಕಿ ಜಿಲ್ಲೆಯ ತೊಡುಪುಳದಲ್ಲಿರುವ ನ್ಯೂಮನ್ ಕಾಲೇಜಿನ ಪ್ರೊಫೆಸರ್ ಟಿ ಜೆ ಜೋಸೆಫ್ ಅವರ ಬಲಗೈಯನ್ನು ಈಗ ಕಾನೂನುಬಾಹಿರವಾದ ಇಸ್ಲಾಮಿಕ್ ಸಂಘಟನೆಯಾದ ಪಿಎಫ್‌ಐ ಕಾರ್ಯಕರ್ತರು ಕತ್ತರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಮೊದಲು ಮೊದಲ ಹಂತದ ವಿಚಾರಣೆ ನಡೆಸಿದಾಗ 13 ಮಂದಿ ಮೇಲಿದ್ದ ಆರೋಪ ಸಾಬೀತಾಗಿತ್ತು. 18 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿತು. ತೀರ್ಪಿನ ನಂತರ 11 ಮಂದಿಯ ವಿರುದ್ಧ ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿತ್ತು. ಆರೋಪಿಗಳೆಲ್ಲರೂ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ (PFI) ಸದಸ್ಯರಾಗಿದ್ದರು.

ಏನಿದು ಪ್ರಕರಣ?
ಕಾಲೇಜಿನಲ್ಲಿ ನಡೆದ ಆಂತರಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಪ್ರವಾದಿಯನ್ನು ಅವಮಾನಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ 2010ರ ಜುಲೈ 4 ರಂದು ತೊಡುಪುಳದ ನ್ಯೂಮನ್ ಕಾಲೇಜಿನ ಪ್ರೊಫೆಸರ್‌ ಟಿಜೆ ಜೋಸೆಫ್‌ ( T J Joseph ) ಅವರ ಮೇಲೆ ದಾಳಿ ನಡೆದಿತ್ತು. ಶಸ್ತ್ರ ಸಜ್ಜಿತರಾಗಿಯೇ ಆಯುಧ ಮತ್ತು ಸ್ಫೋಟಕ ಸಾಮಗ್ರಿಗಳೊಂದಿಗೆ ಕಾರಿನಲ್ಲಿ ಬಂದಿದ್ದ ಪಿಎಫ್‌ಐ ಕಾರ್ಯಕರ್ತರು ಜೋಸೆಫ್‌ ಅವರ ಕಾರನ್ನು ತಡೆದು ನಿಲ್ಲಿಸಿದ್ದರು. ಬಳಿಕ ಕಾರಿನಿಂದ ಜೋಸೆಫ್‌ ಅವರನ್ನು ಹೊರಗಡೆ ಎಳೆದು ಕೊಡಲಿಯಿಂದ ಬಲಗೈಯನ್ನು ಕತ್ತರಿಸಿ ಹತ್ಯೆಗೆ ಯತ್ನಿಸಿ ಎಡಗೈಯನ್ನು ಕತ್ತರಿಸಿದ್ದರು. ಈ ಸಂದರ್ಭದಲ್ಲಿ ಜೋಸೆಫ್‌ ಅವರ ಸಹೋದರಿ ಕೃತ್ಯವನ್ನು ತಡೆಯಲು ಮುಂದಾದಾಗ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕಾರನ್ನು ಜಖಂಗೊಳಿಸಿ ಪರಾರಿಯಾಗಿದ್ದರು.
 

SCROLL FOR NEXT