ನವದೆಹಲಿ: ಎಲ್ಲಾ ಕಳ್ಳರಿಗೂ ಮೋದಿ ಸರ್ನೇಮ್ ಇದೆ' ಎಂಬ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಂಸದ ರಾಹುಲ್ ಗಾಂಧಿ ಅವರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ.
ಸೂರತ್ ನ್ಯಾಯಾಲಯವು ತಮಗೆ ವಿಧಿಸಿರುವ ಶಿಕ್ಷೆಗೆ ತಡೆ ನೀಡುವಂತೆ ಕೋರಿ ರಾಹುಲ್ ಗಾಂಧಿ ಅವರು ಅರ್ಜಿ ಸಲ್ಲಿಸಿದ್ದರು. ಇದನ್ನು ತುರ್ತು ವಿಚಾರಣೆಗೆ ಎತ್ತಿಕೊಳ್ಳುವಂತೆ ಮನವಿ ಮಾಡಲಾಗಿತ್ತು.
ಮಂಗಳವಾರ ಸಿಜೆಐ ಡಿವೈ ಚಂದ್ರಚೂಡ್ ಅವರ ಎದುರು ಮಾನಹಾನಿ ಪ್ರಕರಣದ ಶಿಕ್ಷೆ ವಿರುದ್ಧದ ಮೇಲ್ಮನವಿ ಅರ್ಜಿ ಪರಿಶೀಲನೆಗೆ ಬಂದಿತ್ತು. ಈ ಅರ್ಜಿ ಕುರಿತ ವಿಚಾರಣೆಯನ್ನು ಸಿಜೆಐ ಚಂದ್ರಚೂಡ್ ಅವರು ಅದನ್ನು ಜುಲೈ 21ಕ್ಕೆ ನಿಗದಿಪಡಿಸಿದರು.
ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಗುಜರಾತ್ ಹೈಕೋರ್ಟ್ ತೀರ್ಪು: ಸುಪ್ರೀಂ ಕೋರ್ಟ್ ಮೊರೆ ಹೋಗಲು ಕಾಂಗ್ರೆಸ್ ನಿರ್ಧಾರ
ಸೂರತ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಅವರು ಸಲ್ಲಿಸಿದ್ದ ಅರ್ಜಿಗಳನ್ನು ಸೂರತ್ ಮ್ಯಾಜಿಸ್ಟ್ರೇಟ್ ಕೋರ್ಟ್ ಹಾಗೂ ಗುಜರಾತ್ ಹೈಕೋರ್ಟ್ ವಜಾಗೊಳಿಸಿದ್ದವು. ಇದರಿಂದ ರಾಹುಲ್ ಗಾಂಧಿ ಅವರ ಶಿಕ್ಷೆಗೆ ತಡೆ ಸಿಕ್ಕಿರಲಿಲ್ಲ. ಹೀಗಾಗಿ ಶಿಕ್ಷೆ ಕಾರಣದಿಂದ ಅವರು ಕಳೆದುಕೊಂಡಿರುವ ಸಂಸತ್ ಸದಸ್ಯ ಸ್ಥಾನವನ್ನು ಮರಳಿ ಪಡೆಯುವುದು ಸಾಧ್ಯವಾಗಿಲ್ಲ. ಇದೀಗ ಅವರ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿರುವುದರಿಂದ ಎಲ್ಲರ ಗಮನ ಜುಲೈ 21ರ ವಿಚಾರಣೆ ಮೇಲೆ ನೆಟ್ಟಿದೆ.