ದೇಶ

ದೆಹಲಿ: ಬೀಡಿ ಕೊಡಲು ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬನ ಹತ್ಯೆ

Ramyashree GN

ನವದೆಹಲಿ: ದೆಹಲಿಯ ಶಹಬಾದ್ ಡೈರಿ ಪ್ರದೇಶದಲ್ಲಿ ಬೀಡಿಯನ್ನು ನೀಡಲು ನಿರಾಕರಿಸಿದ ನಂತರ ಕಾರ್ಮಿಕನೊಬ್ಬ ವ್ಯಕ್ತಿಯೊಬ್ಬನನ್ನು ಇರಿದು ಕೊಂದಿದ್ದಾನೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಮಂಗಳವಾರ ಈ ಘಟನೆ ನಡೆದಿದ್ದು, ಮೃತರನ್ನು ಶಹಬಾದ್ ಡೈರಿ ನಿವಾಸಿ ಸಂಜಯ್ ಮಿಶ್ರಾ (35) ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಸಂಸ್ಕೃತಿ ಅಪಾರ್ಟ್‌ಮೆಂಟ್ ಬಳಿಯ ಕಾಡಿನಲ್ಲಿ ಮೃತದೇಹವು ಬಿದ್ದಿದೆ. ದೇಹದ ತುಂಬೆಲ್ಲ ಇರಿತದ ಗಾಯಗಳಾಗಿವೆ ಎಂದು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿತು.

ಸ್ಥಳಕ್ಕಾಗಮಿಸಿ ನೋಡಿದಾಗ, ಕರೆ ಮಾಡಿದವರನ್ನು ಸಿವಿಲ್ ಡಿಫೆನ್ಸ್ ಸ್ವಯಂಸೇವಕ ಸುಮನ್ ಎಂದು ಗುರುತಿಸಲಾಗಿದೆ ಮತ್ತು ಅವರು ತಮ್ಮ ಸ್ನೇಹಿತ ಸುಧೀರ್ ಅವರೊಂದಿಗೆ ಮಹದೇವ್ ಚೌಕ್ ಬಳಿಯ ಖಾಲಿ ಜಾಗದಲ್ಲಿ ಶವ ಬಿದ್ದಿರುವುದನ್ನು ಕಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಶಹಬಾದ್ ಡೈರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ತನಿಖೆ ವೇಳೆ, ಆರೋಪಿಯನ್ನು ಶಹಬಾದ್ ಡೈರಿ ನಿವಾಸಿ 20 ವರ್ಷದ ಸತ್ಯವಾನ್ ಎಂದು ಗುರುತಿಸಲಾಗಿದೆ. ಈತ ಕಾರ್ಪೆಂಟರ್ ಅಂಗಡಿಯೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. 

ಆತನ ವಿಚಾರಣೆ ನಡೆಸಿದಾಗ, ಸೋಮವಾರ ರಾತ್ರಿ ಮಹದೇವ್ ಚೌಕ್ ಬಳಿಯ ಪ್ರದೇಶದ ಮೂಲಕ ಹೋಗುತ್ತಿದ್ದನು ಮತ್ತು ಆಗ ಮಿಶ್ರಾ ತನ್ನ ಸ್ನೇಹಿತನೊಂದಿಗೆ ಇರುವುದನ್ನು ಕಂಡಿದ್ದಾನೆ. ಬಳಿಕ ಅವರನ್ನು ತನಗೆ ಬೀಡಿ ಕೊಡಿಸುವಂತೆ ಕೇಳಿದ್ದಾನೆ. ಆಗ ಅವರು ಈತನನ್ನು ನಿಂದಿಸಿದ್ದಾರೆ. ಇದರಿಂದ ಕೋಪಗೊಂಡ ಆರೋಪಿ, ಮಿಶ್ರಾ ಮತ್ತು ಅವರ ಸ್ನೇಹಿತನಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಅಪರಾಧಕ್ಕೆ ಬಳಸಲಾಗಿದ್ದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

SCROLL FOR NEXT