ದೇಶ

ಸಂಸತ್ತಿನ ಮುಂಗಾರು ಅಧಿವೇಶನ: ಅಗಲಿದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಕೆ, ಲೋಕಸಭೆ ಕಲಾಪ ಮಧ್ಯಾಹ್ನಕ್ಕೆ ಮುಂದೂಡಿಕೆ

Sumana Upadhyaya

ನವದೆಹಲಿ: ಸಂಸತ್ತು ಮುಂಗಾರು ಅಧಿವೇಶನ ಆರಂಭವಾದ ಕೂಡಲೇ ಉಭಯ ಸದನಗಳ ಕಲಾಪ ಮುಂದೂಡಿಕೆಯಾಗಿದೆ. ಲೋಕಸಭೆ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮತ್ತು ರಾಜ್ಯಸಭಾ ಕಲಾಪವನ್ನು ಅಗಲಿದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಕೆ ನಂತರ ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಗಿದೆ. 

ಮುಂಗಾರು ಅಧಿವೇಶನದ ಮೊದಲ ದಿನವಾದ ಗುರುವಾರ, ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಸೇರಿದಂತೆ ಇಬ್ಬರು ಹಾಲಿ ಸದಸ್ಯರು ಮತ್ತು 11 ಮಾಜಿ ಸಂಸದರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಲೋಕಸಭೆಯನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಸದನದ ಸಭೆ ಮುಗಿದ ತಕ್ಷಣ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಹಾಲಿ ಸಂಸದರಾದ ರತ್ತನ್ ಲಾಲ್ ಕಟಾರಿಯಾ ಮತ್ತು ಬಲುಭೌ ಅಲಿಯಾಸ್ ಸುರೇಶ್ ನಾರಾಯಣ ಧನೋರ್ಕರ್ ಅವರಿಗೆ ಗೌರವ ಸಲ್ಲಿಸಿದರು.

ಕಳೆದ ಕೆಲವು ತಿಂಗಳುಗಳಲ್ಲಿ 11 ಮಾಜಿ ಸದಸ್ಯರು ನಿಧನರಾಗಿದ್ದಾರೆ. ಮೃತಪಟ್ಟವರಲ್ಲಿ ಆರನೇ ಲೋಕಸಭೆಯ ಸದಸ್ಯರಾಗಿದ್ದ ಬಾದಲ್, ರಂಜಿತ್ ಸಿಂಗ್, ಸುಜನ್ ಸಿಂಗ್ ಬುಂದೇಲಾ, ಸಂದೀಪನ್ ಥೋರಟ್, ವಿಶ್ವನಾಧಮ್ ಕನಿತಿ, ಅತೀಕ್ ಅಹ್ಮದ್, ತ್ರಿಲೋಚನ್ ಕನುಂಗೋ, ಇಲ್ಯಾಸ್ ಅಜ್ಮಿ, ಅನಾದಿ ಚರಣ್ ದಾಸ್, ನಿಹಾಲ್ ಸಿಂಗ್ ಮತ್ತು ರಾಜ್ ಕರಣ್ ಸಿಂಗ್ ಸೇರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ಅಧೀರ್ ರಂಜನ್ ಚೌಧರಿ ಸದನದಲ್ಲಿ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಪಂಜಾಬ್‌ನ ಜಲಂಧರ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಸುಶೀಲ್ ಕುಮಾರ್ ರಿಂಕು ಪ್ರಮಾಣ ವಚನ ಸ್ವೀಕರಿಸಿದರು. ಅವರು ಈಗ ಸಂಸತ್ತಿನ ಕೆಳಮನೆಯಲ್ಲಿ ಆಮ್ ಆದ್ಮಿ ಪಕ್ಷದ ಏಕೈಕ ಸದಸ್ಯರಾಗಿದ್ದಾರೆ.

ಮಣಿಪುರ ರಾಜ್ಯದಲ್ಲಿ ಹಿಂಸಾಚಾರ ಕುರಿತು ಚರ್ಚೆಗೆ ಒತ್ತಾಯಿಸಿ ಶ್ರದ್ಧಾಂಜಲಿ ಸಲ್ಲಿಕೆ ನಂತರ ಉಭಯ ಸದನಗಳಲ್ಲಿ ವಿರೋಧ ಪಕ್ಷಗಳ ನಾಯಕರು ಒತ್ತಾಯಿಸಿ ಗದ್ದಲವೆಬ್ಬಿಸಿದರು. 

SCROLL FOR NEXT