ಗುವಾಹಟಿ: ಮಣಿಪುರ ಸದ್ಯದ ಬಿಕ್ಕಟ್ಟಿನಿಂದ ಹೊರಬರಬೇಕು ಮತ್ತು ರಾಜ್ಯದಲ್ಲಿ ಶಾಂತಿ ಮರು ಸ್ಥಾಪಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುಡಕಟ್ಟು ಮಹಿಳೆಯರ ಅರೆಬೆತ್ತಲೆ ಮೆರವಣಿಗೆ ಘಟನೆಯು ಗಂಭೀರ ಮತ್ತು ಸೂಕ್ಷ್ಮ ವಿಷಯವಾಗಿದ್ದು, ರಾಜ್ಯವು ಕಠಿಣ ಹಂತವನ್ನು ಹಾದುಹೋಗುತ್ತಿದೆ. ಅಲ್ಲಿನ ಎಲ್ಲಾ ಸಮುದಾಯಗಳು ನರಳುತ್ತಿವೆ. ಮಣಿಪುರ ಒಂದು ಸುಂದರ ರಾಜ್ಯವಾಗಿದ್ದು, ಬಿಕ್ಕಟ್ಟಿನಿಂದ ಹೊರಬರಬೇಕಾಗಿದೆ ಮತ್ತು ರಾಜ್ಯದಲ್ಲಿ ಶಾಂತಿಯನ್ನು ಮರು ಸ್ಥಾಪಿಸಲು ನಾವೆಲ್ಲರೂ ಪ್ರಾಮಾಣಿಕವಾಗಿ, ಪ್ರಯತ್ನಿಸಬೇಕಾಗಿದೆ ಎಂದರು.
ಇದನ್ನೂ ಓದಿ: ಲೋಕಸಭೆ: ಮಣಿಪುರ ಪರಿಸ್ಥಿತಿ ಕುರಿತು ವಿಪಕ್ಷಗಳಿಂದ ತೀವ್ರ ಗದ್ದಲ, ಕೋಲಾಹಲ, ಸೋಮವಾರಕ್ಕೆ ಕಲಾಪ ಮುಂದೂಡಿಕೆ
ಈ ರೀತಿಯ ಘಟನೆಯು ಪ್ರತಿಯೊಬ್ಬರನ್ನು ನೋಯಿಸುತ್ತದೆ ಮತ್ತು ಸಮಸ್ಯೆ ವಿವರಿಸಲು ಅಥವಾ ಪರಿಹರಿಸಲು ಯಾವುದೇ ಪದಗಳಿಲ್ಲ ಎಂದ ಅವರು, ಅಪರಾಧಿಗಳನ್ನು ಶಿಕ್ಷಿಸಲು ಎಲ್ಲಾ ಪ್ರಯತ್ನ ಮಾಡುವ ಭರವಸೆಯಿದೆ ಎಂದರು.
ಮಣಿಪುರದಲ್ಲಿ ನಡೆದ ಘಟನೆಗೆ ರಾಷ್ಟ್ರ ಹೇಗೆ ಅವಮಾನದಿಂದ ತಲೆ ತಗ್ಗಿಸುತ್ತದೆ ಎಂಬುದನ್ನು ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭಕ್ಕೂ ಮುನ್ನಾ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಹೇಳಿಕೆಯನ್ನು ನಿರ್ಮಲಾ ಸೀತಾರಾಮನ್ ಉಲ್ಲೇಖಿಸಿದರು.