ದೇಶ

ಸಂಸತ್ತು ಕಲಾಪ ನುಂಗಿಹಾಕುತ್ತಿರುವ ಮಣಿಪುರ ಸಮಸ್ಯೆ; ಆಪ್ ಸಂಸದನ ಅಮಾನತು; ವಿರೋಧ ಪಕ್ಷಗಳ ಧರಣಿ

Sumana Upadhyaya

ನವದೆಹಲಿ: ಮಣಿಪುರ ರಾಜ್ಯದ ಹಿಂಸಾಚಾರ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸದನದಲ್ಲಿ ವಿಸ್ತೃತವಾಗಿ ಮಾತನಾಡಬೇಕೆಂದು ವಿರೋಧ ಪಕ್ಷ ಸದಸ್ಯರು ನಿರಂತರವಾಗಿ ಪ್ರತಿಭಟನೆ ಮಾಡಿದ್ದರಿಂದ ಸಂಸತ್ತಿನ ಉಭಯ ಸದನಗಳ ಕಲಾಪವನ್ನು ನಿನ್ನೆ ಸೋಮವಾರ ಮುಂದೂಡಲಾಗಿತ್ತು. 

ಇಂದು ಮಂಗಳವಾರ ಬೆಳಗ್ಗೆ ಸದನ ಕಾರ್ಯಕಲಾಪ ಆರಂಭವಾಗುವಾಗಲೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ. ಇತ್ತೀಚೆಗೆ ರಚನೆಯಾದ ಮೈತ್ರಿ ಒಕ್ಕೂಟ ಇಂಡಿಯಾದ ಸದಸ್ಯರು ಇಂದು ಕಾಂಗ್ರೆಸ್ ಅಧ್ಯಕ್ಷ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ನಿವಾಸದಲ್ಲಿ ಸಭೆ ಸೇರಿ ತಮ್ಮ ಮುಂದಿನ ಹೋರಾಟದ ಕಾರ್ಯತಂತ್ರಗಳನ್ನು ರೂಪಿಸಲಿದ್ದಾರೆ.

ಇಂದು ಬೆಳಗ್ಗೆ 10 ಗಂಟೆಗೆ ಖರ್ಗೆಯವರ ನಿವಾಸದಲ್ಲಿ ಸಭೆ ನಡೆಯಲಿದೆ. ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯಸಭೆಯ ಕಲಾಪ ಆರಂಭವಾದಾಗ 'ಟೈಡಲ್ ವಿದ್ಯುತ್ ಅಭಿವೃದ್ಧಿ' ಕುರಿತು 20ನೇ ವರದಿಯನ್ನು ಸದನದಲ್ಲಿ ಮಂಡಿಸಲಾಗುತ್ತದೆ. ಭಾರತದ ವಿದೇಶಾಂಗ ಮೊದಲ ನೀತಿ ಕುರಿತು ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಇಲಾಖೆಗೆ ಸಂಬಂಧಪಟ್ಟ 22ನೇ ವರದಿಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗುತ್ತದೆ. 

ಅಜೆಂಡಾದಲ್ಲಿ ಹಲವು ವಿಷಯಗಳ ಕುರಿತು ಚರ್ಚೆ, ಮಸೂದೆ ಮಂಡನೆಯ ಉದ್ದ ಪಟ್ಟಿಯೊಂದಿಗೆ ಜುಲೈ 20ರಂದು ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿತ್ತು. ಆದರೆ ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆ, ಒತ್ತಾಯ, ಗದ್ದಲ-ಕೋಲಾಹಲದಿಂದ ಇಷ್ಟು ಇಂದು 5ನೇ ದಿನಕ್ಕೆ ಕಾಲಿಡುತ್ತಿದ್ದರೂ ಯಾವುದೇ ರೀತಿಯ ಫಲಪ್ರದ ಚರ್ಚೆಗಳು ನಡೆದಿಲ್ಲ. 

ಆಪ್ ಸದಸ್ಯನ ವಜಾ, ಪ್ರತಿಭಟನೆ: ಸಭಾಪತಿಗಳ ಸೂಚನೆ, ಆದೇಶವನ್ನು ಪಾಲಿಸದ ಆಪ್ ನಾಯಕ ಸಂಜಯ್ ಸಿಂಗ್ ಅವರನ್ನು ಮುಂಗಾರು ಅಧಿವೇಶನ ಮುಗಿಯುವವರೆಗೆ ಕಲಾಪದಿಂದ ಅಮಾನತು ಮಾಡಿರುವುದನ್ನು ವಿರೋಧಿಸಿ ಆಪ್ ನಾಯಕರು ಪ್ರತಿಭಟನೆಗಿಳಿದಿದ್ದಾರೆ. ನಿನ್ನೆ ರಾತ್ರಿಯಿಡೀ ಸಂಸತ್ತು ಆವರಣದಲ್ಲಿ ವಿರೋಧ ಪಕ್ಷಗಳ ಸದಸ್ಯರು ಧರಣಿ ಕುಳಿತಿದ್ದು ಇಂದು ಕೂಡ ಮುಂದುವರಿಸಿದ್ದಾರೆ. 

ಆಪ್ ಸಂಸದ ರಾಘವ್ ಚಡ್ಡಾ ಮಾತನಾಡಿ, ಮಣಿಪುರ ವಿಷಯದ ಬಗ್ಗೆ ಸರ್ಕಾರ ಚರ್ಚೆ ನಡೆಸಬೇಕು ಎಂಬುದು ವಿರೋಧ ಪಕ್ಷಗಳ ಏಕೈಕ ಬೇಡಿಕೆಯಾಗಿದೆ. ಈ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಭಾರತದಲ್ಲಿ ಆಗುತ್ತಿಲ್ಲ ಎಂಬುದು ಬೇಸರದ ಸಂಗತಿ. ಮಣಿಪುರ ಸಿಎಂ ಎನ್ ಬಿರೇನ್ ಸಿಂಗ್ ಅವರನ್ನು ಸ್ಥಾನದಿಂದ ವಜಾಗೊಳಿಸಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು. ಆಪ್ ಮಣಿಪುರ ಸಮಸ್ಯೆಯನ್ನು ದೇಶಾದ್ಯಂತ ಎತ್ತಲು ಮುಂದಾಗಿದೆ ಎಂದರು. ಪ್ರಧಾನ ಮಂತ್ರಿಗಳು ಸಂಸತ್ತಿನಲ್ಲಿ ಯಾವಾಗಲೂ ಹೇಳಿಕೆಗಳನ್ನು ನೀಡುತ್ತಾರೆ. ಹಾಗಿರುವಾಗ ಮಣಿಪುರದ ಕುರಿತು ಪ್ರಧಾನಿ ಹೇಳಿಕೆ ನೀಡಲು ಏಕೆ ಹೆದರುತ್ತಾರೆ, ಮಣಿಪುರದ ಬಗ್ಗೆ ಹೇಳಿಕೆ ನೀಡುವಂತೆ ನಾವು ಕೈ ಜೋಡಿಸಿ ಅವರನ್ನು ವಿನಂತಿಸುತ್ತೇವೆ. ಮಣಿಪುರವು ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ಸಂಸತ್ತು ಸಕಾರಾತ್ಮಕ ಮತ್ತು ಶಾಂತಿಯುತ ಸಂದೇಶವನ್ನು ದೇಶಕ್ಕೆ ನೀಡಬೇಕು. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ದೊಡ್ಡ ವಿಷಯವಾಗಿದೆ, ನಾವು ಅದರಲ್ಲಿ ರಾಜಕೀಯ ಮಾಡಲು ಹೋಗಬಾರದು ಎಂದರು.

SCROLL FOR NEXT