ದೇಶ

ಅಜಿತ್ ಪವಾರ್ ಮಹಾರಾಷ್ಟ್ರದ ಸಿಎಂ ಆಗುವ ಅವಕಾಶ: ಪ್ರಫುಲ್ ಪಟೇಲ್

Nagaraja AB

ನಾಗ್ಪುರ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಜನಪ್ರಿಯ ಮತ್ತು ಭಾರೀ ನಾಯಕರಾಗಿದ್ದು, ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಗಲಿದೆ ಎಂದು ಎನ್ ಸಿಪಿ ರಾಜ್ಯಸಭಾ ಸದಸ್ಯ ಪ್ರಫುಲ್ ಪಟೇಲ್  ಗುರುವಾರ ಹೇಳಿದ್ದಾರೆ. 

ನಾಗ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಸಿಎಂ ಹುದ್ದೆ ಖಾಲಿ ಇಲ್ಲ. ಅಜಿತ್ ಪವಾರ್ ಜನಪ್ರಿಯ ನಾಯಕರಾಗಿದ್ದು, ಅವರು ಹಲವಾರು ವರ್ಷಗಳಿಂದ ನಮ್ಮ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಕೆಲಸ ಮಾಡುವವರಿಗೆ ಇಂದು, ನಾಳೆ ಅಥವಾ ಮರುದಿನ ಅವಕಾಶ ಸಿಗುತ್ತದೆ. ಅನೇಕರಿಗೆ ಅವಕಾಶ ಸಿಕ್ಕಿದೆ. ಅಜಿತ್ ದಾದಾ ಅವರಿಗೆ ಇಂದು ಅಲ್ಲ, ನಾಳೆ ಅಥವಾ ಇನ್ಮುಂದೆ ಯಾವಾಗ ಬೇಕಾದರೂ ಸಿಗುತ್ತದೆ. ಆ ದಿಕ್ಕಿನಲ್ಲಿ ನಾವು ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.

ಆಗಸ್ಟ್ 10 ರಂದು ಏಕನಾಥ್ ಶಿಂಧೆ ಅವರ ಸ್ಥಾನಕ್ಕೆ ಅಜಿತ್ ಪವಾರ್ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ನೇಮಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ಇತ್ತೀಚೆಗೆ ಹೇಳಿದ್ದರು. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ದೇವೇಂದ್ರ ಫಡ್ನವೀಸ್ ಚವಾಣ್ ಅವರ ಹೇಳಿಕೆಯನ್ನು ತಳ್ಳಿಹಾಕಿದ್ದು, ಶಿಂಧೆ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಮತ್ತು ರಾಜ್ಯದಲ್ಲಿ ಯಾವುದೇ  ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.

ಜುಲೈ 2 ರಂದು ಅಜಿತ್ ಪವಾರ್ ಮತ್ತು ಇತರ ಎಂಟು ಎನ್‌ಸಿಪಿ ಶಾಸಕರು ಶಿವಸೇನೆ-ಬಿಜೆಪಿ ಸರ್ಕಾರಕ್ಕೆ ಸೇರಿದರು. ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ, ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ, ನಿರ್ಣಾಯಕ ಹಣಕಾಸು ಇಲಾಖೆಯನ್ನು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್‌ಗೆ ನೀಡಲಾಯಿತು.
        
ಅಜಿತ್ ಪವಾರ್ ಸರ್ಕಾರ ಸೇರಿರುವುದರಿಂದ ತಮಗೆ ಯಾವುದೇ ಬೆದರಿಕೆ ಇಲ್ಲ ಎಂದು ಶಿಂಧೆ ಹೇಳಿದ್ದಾರೆ. ಕೇಂದ್ರದ ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಯ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರಫುಲ್ ಪಟೇಲ್, ಕೇಂದ್ರ ಸಂಪುಟ ಪುನಾರಚನೆ ಅಥವಾ ವಿಸ್ತರಣೆಯ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಪ್ರಫುಲ್ ಪಟೇಲ್ ತಿಳಿಸಿದರು.

SCROLL FOR NEXT