ನವದೆಹಲಿ: ರಾಜ್ಯಸಭೆಯಲ್ಲಿ ತಮ್ಮ ಹೇಳಿಕೆ ಅಡ್ಡಿಯುಂಟು ಮಾಡಿದ ಪ್ರತಿಪಕ್ಷಗಳ ವಿರುದ್ಧ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಗುರುವಾರ ತೀವ್ರವಾಗಿ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ತಿಂಗಳ ಬೆಳವಣಿಗೆಗಳನ್ನು ಸದನಕ್ಕೆ ತಿಳಿಸಲು ಬಯಸಿದ್ದೆ. ಪ್ರಧಾನಮಂತ್ರಿಗಳ ಅಮೆರಿಕಾ ಭೇಟಿಯ ಎಲ್ಲರಿಗೂ ತಿಳಿದಿದೆ. ಆದರೆ, ಪ್ರತಿಪಕ್ಷಗಳು ಅದನ್ನು ಕೇಳಲು ಸಿದ್ಧರಿರಲಿಲ್ಲ. ಇದು ಬಹಳ ಬೇಸರ ತರಿಸಿತು ಎಂದು ಹೇಳಿದರು.
ಪ್ರತಿಪಕ್ಷಗಳು ದೇಶದ ಪ್ರತಿಯೊಂದು ಸಾಧನೆಯನ್ನು ಟೀಕಿಸಲು ಬಯಸುತ್ತಿದ್ದಾರೆಂದು ಎನಿಸತೊಡಗಿದೆ. ವಿದೇಶಾಂಗ ನೀತಿ ಎಂಬುದು ಸಾಮಾನ್ಯವಾಗಿ ಒಟ್ಟಾಗಿ ಕೆಲಸ ಮಾಡುವ ಕ್ಷೇತ್ರವಾಗಿದೆ. ಪಕ್ಷವನ್ನು ಬದಿಗಿಟ್ಟು, ದೇಶಗ ಸಾಧನೆಯನ್ನು ಪ್ರಶಂಸಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಸಂಸತ್ತಿನಲ್ಲಿ ಮಾತನಾಡದ ಪ್ರಧಾನಿ ರಾಜಸ್ಥಾನದಲ್ಲಿ ರಾಜಕೀಯ ಭಾಷಣ ಮಾಡುತ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ
ಪ್ರತಿಪಕ್ಷಗಳು ತಮ್ಮ ಮೈತ್ರಿಕೂಟದ ಹೆಸರು 'ಇಂಡಿಯಾ' ಎಂದು ಹೇಳಿಕೊಳ್ಳುತ್ತಾರೆ, ಆದರೆ ಅವರು ಭಾರತದ ರಾಷ್ಟ್ರೀಯ ಹಿತಾಸಕ್ತಿಗಳ ಬಗ್ಗೆ ಕೇಳಲು ಸಿದ್ಧರಿಲ್ಲದಿದ್ದರೆ ಏನು ಹೇಳಬೇಕು? ಇದು ಯಾವ ರೀತಿಯ INDIA? ಎಂದು ಪ್ರಶ್ನಿಸಿದರು.
ಪ್ರತಿಪಕ್ಷಗಳು ಪಕ್ಷಪಾತ ರಾಜಕಾರಣಕ್ಕೆ ಆದ್ಯತೆ ನೀಡಿರುವುದು ಅತ್ಯಂತ ದುರದೃಷ್ಟಕರ. ಭಾರತದ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳು ಇತರ ದೇಶಗಳಿಂದ ಅತ್ಯುನ್ನತ ಗೌರವಗಳನ್ನು ಪಡೆದಿದ್ದಾರೆ. ಪ್ರತಿಪಕ್ಷಗಳಿಗೆ ರಾಷ್ಟ್ರಪತಿಯನ್ನು ಗೌರವಿಸಲು ಸಾಧ್ಯವಾಗದಿದ್ದರೆ, ಉಪರಾಷ್ಟ್ರಪತಿಯನ್ನು ಗೌರವಿಸಲು ಸಾಧ್ಯವಾಗದಿದ್ದರೆ, ಪ್ರಧಾನಮಂತ್ರಿಗಳನ್ನು ಗೌರವಿಸಲು ಸಾಧ್ಯವಾಗದಿರುವುದು ಅತ್ಯಂತ ವಿಷಾದನೀಯ ಸ್ಥಿತಿಯಾಗಿದೆ. ಇದು ಕೇವಲ ಸರಕಾರದ ಸಾಧನೆಯಷ್ಟೇ ಅಲ್ಲ. ದೇಶದ ಸಾಧನೆಯಾಗಿದೆ. ಪ್ರತಿಪಕ್ಷಗಳು ರಾಷ್ಟ್ರೀಯ ಹಿತಾಸಕ್ತಿ ವಿಷಯಗಳಲ್ಲಿ ರಾಜಕೀಯವನ್ನು ಬದಿಗಿಡಬೇಕು ಎಂದು ಹೇಳಿದರು.